ಚಿಕ್ಕಮಗಳೂರು: ಜಿಲ್ಲೆಯ ಬಹುತೇಕ ಕಡೆ ಇಂದು ಗುಡುಗು, ಸಿಡಿಲಿನೊಂದಿಗೆ ಆಲಿಕಲ್ಲು ಮಳೆ ಸುರಿದಿದೆ. ಹಲವು ದಿನಗಳಿಂದ ವಿಪರೀತ ತಾಪಮಾನದಿಂದ ಬಸವಳಿದಿದ್ದ ಜನರಿಗೆ ಇಂದು ಮಳೆ ತಂಪೆರೆಯಿತು.
ಮಧ್ಯಾಹ್ನ ೨ ಗಂಟೆಗೆ ಆರಂಭವಾದ ಮಳೆ ೩ ಗಂಟೆಯವರೆಗೂ ಅಬ್ಬರಿಸಿದ್ದು ಬಿಸಿಲಿನ ಝಳಕ್ಕೆ ಸುಸ್ತಾಗಿದ್ದ ಜನರಿಗೆ ಮಳೆಯ ಆಗಮನ ಖುಷಿ ನೀಡಿದೆ. ಹವಮಾನ ಮುನ್ಸೂಚನೆಯಂತೆ ಮುಂದಿನ ನಾಲ್ಕು ದಿನ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಲಿದೆ. ಚಿಕ್ಕ ಮಗಳೂರು ನಗರ ಸೇರಿದಂತೆ ಗ್ರಾ ಮೀಣ ಪ್ರದೇಶಗಳಲ್ಲಿ ಆಲಿಕಲ್ಲು ಜೊತೆಗೆ ಗುಡುಗು ಮಿಂಚಿನ ಮಳೆ ಸುರಿದಿದೆ.
ಮಧ್ಯಾಹ್ನದ ವೇಳೆ ಬಿರುಗಾಳಿ ಸಹಿತ ಮಳೆ ಆರ್ಭಟ ಆರಂಭವಾಗಿದ್ದು ಗಂಟೆಗಟ್ಟಲೇ ಸುರಿದ ಮಳೆ ಯಿಂದಾಗಿ ವಾಹನ ಸವಾರರು ಪರದಾಡುವಂತಾಗಿತ್ತು. ಬಿರುಗಾಳಿಗೆ ಕೆಲವೆಡೆ ಮರದ ಕೊಂಬೆಗಳು ಮುರಿದುಬಿದ್ದ ಘಟನೆ ನಡೆದಿದೆ. ಬಂಟರಭವನದ ಬಳಿ ಮರದ ರೆಂಬೆ ಬಿದ್ದ ಪರಿಣಾಮ ಕೆಲ ಕಾಲ ವಾಹನ ಸಂಚಾರಕ್ಕೆ ತೊಡಕುಂಟಾಯಿತು.
ನಗರದ ತಗ್ಗುಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿತ್ತು. ಅಗಸರ ಬೀದಿಯಲ್ಲಿ ರಸ್ತೆಯಲ್ಲಿ ನೀರು ನಿಂತು ವಾಹನಗಳು ಜಲಾವೃತವಾಗಿದ್ದವು. ತೀವ್ರ ನೀರಿನ ಕೊರತೆ ಎದುರಿಸುತ್ತಿದ್ದ ಬರಪೀಡಿತ ಪ್ರದೇಶದಲ್ಲಿ ವರುಣ ಕೃಪೆ ತೋರಿದ್ದು ಮೂರ್ನಾಲ್ಕು ದಿನ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿದೆ.
ನಗರದ ಕೆಲವು ರಸ್ತೆಗಳ ಚರಂಡಿಗಳಲ್ಲಿ ಕಸ ತುಂಬಿದ್ದ ಕಾರಣ ನೀರು ಸರಾಗವಾಗಿ ಹರಿಯದೇ ರಸ್ತೆಗಳಲ್ಲಿ ತುಂಬಿ ಹರಿದ ಪರಿಣಾಮ ವಾಹನ ಸವಾರರು ಮತ್ತು ಪಾದಚಾರಿಗಳಿಗೆ ತೊಂದರೆ ಎದುರಾಯಿತು. ಹಿರೇಮಗಳೂರಿನಲ್ಲಿ ಸುರಿದ ಭಾರೀ ಆಲಿಕಲ್ಲು ಮಳೆಯಿಂದ ಅನೇಕರ ಮನೆಗಳ ಮೇಲಿರುವ ಬಿಸಿನೀರಿನ ಸೋಲಾರ್ ಟ್ಯೂಬ್ಗಳು ಹಾನಿಗೊಂಡಿವೆ.
ಹಿರೇಮಗಳೂರು ಪುಟ್ಟಸ್ವಾಮಿಯವರ ಮನೆ ಮೇಲಿದ್ದ ಸೋಲಾರ್ ಟ್ಯೂಬ್ಗಳು, ಅನಿತಾ ದೊರೆಸ್ವಾಮಿ, ಟೈಲರ್ ಪ್ರಕಾಶ್ ಎಂಬುವವರ ಮನೆ ಮೇಲೆ ಅಳವಡಿಸಿದ್ದ ಸೋಲಾರ್ ಟ್ಯೂಬ್ಗಳು ಹಾನಿಗೊಂಡಿವೆ.