ವಿಶ್ವಸಂಸ್ಥೆ: ಇಸ್ರೇಲ್ ಹಮಾಸ್ ಸಂಘರ್ಷ ತೀವ್ರವಾಗಿದೆ. ತನ್ನ ನಾಗರಿಕರ ಹತ್ಯೆಗೆ ಪ್ರತೀಕಾರವಾಗಿ ಇಸ್ರೇಲ್ ಗಾಜಾಪಟ್ಟಿಯಲ್ಲಿ ಬಾಂಬ್ಗಳ ಸುರಿಮಳೆಗೈಯುತ್ತಿದೆ. ಈ ನಡುವೆ
ಪ್ಯಾಲೆಸ್ತೀನ್ ಉದ್ದೇಶವನ್ನು ಬೆಂಬಲಿಸುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯದ ವಿರುದ್ಧ ಭಾರತ ದೂರವುಳಿದಿದೆ. ಮತದಾನದ ನಂತರ ವಿಶ್ವಸಂಸ್ಥೆಯಲ್ಲಿ ಭಾರತದ ಉಪ ಖಾಯಂ ಪ್ರತಿನಿಧಿ ಯೋಜ್ನಾ ಪಟೇಲ್, “ಅಕ್ಟೋಬರ್ 7 ರಂದು ಇಸ್ರೇಲ್ನಲ್ಲಿ ನಡೆದ ಭಯೋತ್ಪಾದಕ ದಾಳಿಗಳು ಆಘಾತಕಾರಿ, ಇದನ್ನು ಖಂಡಿಸಲೇಬೇಕು ಎಂದರು.
ಭಯೋತ್ಪಾದಕ ಕೃತ್ಯಗಳನ್ನು ಸಮರ್ಥನೆ ಮಾಡುವುದು ಸರಿಯಾದ ಕ್ರಮವಲ್ಲ. ನಾವು ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಭಯೋತ್ಪಾದಕರ ವಿರುದ್ಧ ಶೂನ್ಯ ಸಹಿಷ್ಣುತೆಯ ವಿಧಾನ ಅಳವಡಿಸಿಕೊಳ್ಳಬೇಕು ಎಂದರು. ಜೋರ್ಡಾನ್ ದೇಶವು ರಚಿಸಿದ ನಿರ್ಣಯವು ಗಾಜಾ ಪಟ್ಟಿಯಲ್ಲಿ ಅಡೆತಡೆಯಿಲ್ಲದ ಮಾನವೀಯ ಪ್ರವೇಶಕ್ಕೆ ಕರೆ ನೀಡಿದೆ. ಆದರೆ ಹಮಾಸ್ ಬಗ್ಗೆ ಯಾವುದೇ ಉಲ್ಲೇಖ ಮಾಡಿಲ್ಲ ಇದೇ ಕಾರಣಕ್ಕೆ ಭಾರತ ನಿರ್ಣಯದಿಂದ ದೂರ ಉಳಿದಿದೆ. ಹಮಾಸ್ನಿಂದ ಭಯೋತ್ಪಾದಕ ದಾಳಿಗಳನ್ನು ಖಂಡಿಸುವ ಪ್ಯಾರಾಗ್ರಾಫ್ ಅನ್ನು ಸೇರಿಸುವ ತಿದ್ದುಪಡಿಯನ್ನು ಕೆನಡಾ ಪ್ರಸ್ತಾಪಿಸಿದೆ. ಇತರ 87 ರಾಷ್ಟ್ರಗಳೊಂದಿಗೆ ಭಾರತವು ಕೆನಡಾದ ಪ್ರಸ್ತಾವಿತ ತಿದ್ದುಪಡಿಯ ಪರವಾಗಿ ಮತ ಚಲಾಯಿಸಿತು. ಆದರೆ ಮೂರನೇ ಎರಡರಷ್ಟು ಬಹುಮತ ಇಲ್ಲದ ಕಾರಣ ಅದನ್ನು ಅಂಗೀಕರಿಸಲಾಗಲಿಲ್ಲ.