ನವದೆಹಲಿ: ಸ್ವತಃ ತನ್ನ ಕೈಗಳಿಂದಲೇ, ನಿಮ್ಮ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದೇನೆ ಎಂದು ಅಫ್ತಾಭ್ ಅಮೀನ್ ಪೂನಾವಾಲಾ ನನಗೆ ಹೇಳಿದ್ದ ಎಂದು ಶ್ರದ್ಧಾ ವಾಕರ್ಳ ತಂದೆ ಸೋಮವಾರ ದೆಹಲಿ ಕೋರ್ಟ್ನಲ್ಲಿ ಹೇಳಿದ್ದಾರೆ.
ಈ ವರ್ಷ ದಾಖಲಾದ ದೇಶದ ಅತ್ಯಂತ ಸೆನ್ಸೇಷನಲ್ ಕೊಲೆ ಪ್ರಕರಣದಲ್ಲಿ ದೆಹಲಿ ಕೋರ್ಟ್ ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಿಕೊಳ್ಳುವ ಕೆಲಸ ಮಾಡುತ್ತಿದೆ. ಶ್ರದ್ಧಾ ವಾಕರ್ಳನ್ನು ಕತ್ತು ಹಿಸುಕಿ ಕೊಂದಿದ್ದಾಗಿ ತಿಳಿಸಿದ್ದ ಅಫ್ತಾಬ್, ಬಳಿಕ ಗರಗಸವನ್ನು ಖರೀದಿ ಮಾಡಿದ್ದ. ಆಕೆಯ ದೇಹದ ಭಾಗಗಳ ಪೈಕಿ ಹಸ್ತವನ್ನು ಮೊದಲಿಗೆ ಕತ್ತರಿಸಿ ಕಸದ ಬ್ಯಾಗ್ಗೆ ಹಾಕಿದ್ದಾಗಿ ನನಗೆ ತಿಳಿಸಿದ್ದ ಎಂದು ಶ್ರದ್ಧಾಳ ತಂದೆ ಸಾಕ್ಷ್ಯ ನುಡಿಸಿದ್ದಾರೆ.
28 ವರ್ಷದ ಅಫ್ತಾಬ್ ಅಮೀನ್ ಪೂನಾವಾಲಾ ಜೊತೆ ಲಿವ್ ಇನ್ ರಿಲೇಶನ್ಷಿಪ್ನಲ್ಲಿದ್ದ ಶ್ರದ್ಧಾ ವಾಕರ್ಗಳನ್ನು ಕಳೆದ ವರ್ಷ ಮೇ 18 ರಂದು ಅಫ್ತಾಬ್ ಕೊಲೆ ಮಾಡಿದ್ದ. ಬಳಿಕ ಆಕೆಯ ದೇಹದ ಭಾಗವನ್ನು 36 ತುಂಡುಗಳನ್ನಾಗಿ ಮಾಡಿ ಕ್ರೌರ್ಯ ಮೆರೆದಿದ್ದ ಅಫ್ತಾವ್, ಆಕೆಯ ದೇಹದ ಭಾಗಗಳನ್ನು ಫ್ರಿಜ್ನಲ್ಲಿಟ್ಟು, ಹಲವು ದಿನಗಳ ಕಾಲ ಪ್ರತಿ ದಿನ ಒಂದೊಂದು ತುಂಡುಗಳನ್ನು ಅಜ್ಞಾತ ಸ್ಥಳದಲ್ಲಿ ಎಸೆದು ಬಂದಿದ್ದ.
‘ಆತ ಹೇಳಿದ ಉತ್ತರ ಕೇಳಿ ನನಗೆ ಆಘಾತವಾಗಿತ್ತು, ತಲೆಸುತ್ತಲು ಆರಂಭಿಸಿತು. ಕೆಲ ಸಮಯದ ಬಳಿಕ ನಾನು ಚೇತರಿಸಿಕೊಂಡಾಗ, ಆತನೇ ನನ್ನ ಮಗಳನ್ನು ಹೇಗೆ ಕೊಂದೆ ಎನ್ನುವುದನ್ನು ಬಹಿರಂಗಪಡಿಸಲು ಆರಂಭಿಸಿದ್ದ. ಆಕೆಯನ್ನು ಕೊಂದ ಬಳಿಕ ಹಾರ್ಡ್ವೇರ್ ಅಂಗಡಿಯಿಂದ ಗರಗಸ ಹಾಗೂ ಎರಡು ಹೆಚ್ಚುವರಿ ಬ್ಲೇಡ್ಗಳು, ಸುತ್ತಿಗೆ ಇತ್ಯಾದಿಗಳನ್ನು ಖರೀದಿಸಿದ್ದ ಅಫ್ತಾಭ್ ಪೂನಾವಾಲಾ, ಆಕೆಯ ಎರಡೂ ಮಣಿಕಟ್ಟು ಅಂದರೆ ಹಸ್ತವನ್ನು ಕತ್ತರಿಸಿ ಮೊದಲಿಗೆ ಪಾಲಿಥಿನ್ ಕಸದ ಚೀಲಕ್ಕೆ ಹಾಕಿದ್ದಾಗಿ ತಿಳಿಸಿದ್ದ ಎಂದು ವಿಕಾಸ್ ವಾಕರ್ ಹೇಳಿದ್ದಾರೆ.