ಅಹ್ಮದ್ನಗರ: ಎನ್ ಸಿಪಿ ನಾಯಕ ಶರದ್ ಪವಾರ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅವರು ವಾಗ್ದಾಳಿ ನಡೆಸಿದ್ದಾರೆ. ಶಿರಡಿ ಸಮೀಪದ ಕಾಕಡಿ ಗ್ರಾಮದಲ್ಲಿ ರೈತರ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಎನ್ಸಿಪಿ ನಾಯಕರೊಬ್ಬರು ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದರು. ಆ ವೇಳೆ ರೈತರಿಗಾಗಿ ಅವರು ಏನು ಮಾಡಿದ್ದರು, ಯಾವ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಂಡಿದ್ದರು ಎಂದು ಪ್ರಶ್ನಿಸಿದರು.
“ವೈಯಕ್ತಿಕವಾಗಿ, ನನಗೆ ಅವರ ಬಗ್ಗೆ ಗೌರವವಿದೆ. ಆದರೆ ಅವರು ರೈತರಿಗೆ ಏನು ಮಾಡಿದ್ದಾರೆ? ರಾಜ್ಯದ ಹಿರಿಯ ನಾಯಕ ಕೇವಲ ರೈತ ಸಮುದಾಯದ ಹೆಸರಿನಲ್ಲಿ ರಾಜಕೀಯ ಮಾಡಿದ್ದಾರೆ ಎಂದು ಮೋದಿ ಹೇಳಿದರು.
ಅಂಕಿಅಂಶಗಳನ್ನು ಉಲ್ಲೇಖಿಸಿ ಮಾತನಾಡಿದ ಮೋದಿ, ಪವಾರ್ ಅವರು ಕೇಂದ್ರ ಕೃಷಿ ಸಚಿವರಾಗಿದ್ದ ಏಳು ವರ್ಷಗಳಲ್ಲಿ 3.50 ಲಕ್ಷ ಕೋಟಿ ರೂಪಾಯಿಗಳ ಕನಿಷ್ಠ ಬೆಂಬಲ ಬೆಲೆ ಮೂಲಕ ದೇಶಾದ್ಯಂತ ರೈತರಿಂದ ಆಹಾರ ಧಾನ್ಯಗಳನ್ನು ಸಂಗ್ರಹಿಸಿದ್ದರು. ಆದರೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರವು ಏಳು ವರ್ಷಗಳಲ್ಲಿ ರೈತರಿಗೆ 13.50 ಲಕ್ಷ ಕೋಟಿ ರೂಪಾಯಿಗಳನ್ನು ಎಂಎಸ್ಪಿಯಾಗಿ ನೀಡಿದೆ ಎಂದರು. ಈ ವೇಳೆ ಮಾಜಿ ಎನ್ಸಿಪಿ (ಎಪಿ) ನಾಯಕ ಮತ್ತು ಉಪಮುಖ್ಯಮಂತ್ರಿ ಅಜಿತ್ ಪವಾರ್, ರಾಜ್ಯಪಾಲ ರಮೇಶ್ ಬೈಸ್, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಮುಖ್ಯಮಂತ್ರಿ ಏಕನಾಥ್ ಶಿಂಧೆ ಉಪಸ್ಥಿತರಿದ್ದರು.
2014ರ ಮೊದಲು ರೈತರಿಗಾಗಿ ಘೋಷಿಸಿದ ಅನೇಕ ಯೋಜನೆಗಳು ಕಾರ್ಯರೂಪಕ್ಕೆ ಬರಲಿಲ್ಲ. ರೈತರು ತಮಗೆ ಬರಬೇಕಾಗಿದ್ದ ಹಣವನ್ನು ಪಡೆಯಲು ಮಧ್ಯವರ್ತಿಗಳ ಮೇಲೆ ಅವಲಂಬಿತರಾಗಬೇಕಾಗಿತ್ತು. ಆದರೆ, ಬಿಜೆಪಿ ಸರ್ಕಾರ ರಚನೆಯಾದ ನಂತರ, ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ 1.15 ಲಕ್ಷ ಕೋಟಿ ರೂಪಾಯಿಗಳನ್ನು ಜಮಾ ಮಾಡುವ ಮೂಲಕ ಉಳುಮೆದಾರರಿಗೆ ಅಧಿಕಾರ ನೀಡಿದೆ ಎಂದರು.