ನವದೆಹಲಿ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ಬಳಿಕ ಮುಖ್ಯ ಮಂತ್ರಿ ಮಮತಾ ಬ್ಯಾನರ್ಜಿ ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿ ನರೇಂಧ್ರ ಮೋದಿ ಅವರನ್ನು ಭೇಟಿ ಮಾಡಿದ್ದಾರೆ.
ಮೂರು ದಿನಗಳ ದೆಹಲಿ ಪ್ರವಾಸ ಕೈಗೊಂಡಿರುವ ಅವರು ಮೋದಿಯವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಕೋವಿಡ್ ವ್ಯಾಕ್ಸಿನ್ ಕುರಿತು ಚರ್ಚೆಯಾಗಿದ್ದು, ಪಶ್ಚಿಮ ಬಂಗಾಳಕ್ಕೆ ಹೆಚ್ಚಿನ ಲಸಿಕೆ ನೀಡಬೇಕು. ರಾಜ್ಯದಲ್ಲಿನ ವಿವಿಧ ಯೋಜನೆಗಳಿಗೆ ಒಪ್ಪಿಗೆ ನೀಡಬೇಕು ಎಂದಿದ್ದಾರೆ. ಇದರ ಜತೆಗೆ ಅವರ ಬಹುದೊಡ್ಡ ಬೇಡಿಕೆಯಾಗಿರುವ ತಮ್ಮ ರಾಜ್ಯದ ಹೆಸರು ಬದಲಾವಣೆ ಮಾಡಬೇಕು ಎಂಬ ಕೋರಿಕೆಯನ್ನೂ ಅವರು ಪ್ರಧಾನಿ ಮುಂದಿಟ್ಟಿದ್ದಾರೆ. ಪಶ್ಚಿಮ ಬಂಗಾಳದ ಬದಲು ಈ ರಾಜ್ಯವನ್ನು ಬಾಂಗ್ಲಾ ಮಾಡಬೇಕು ಎನ್ನುವುದು ಮಮತಾರ ಬಹು ದಿನಗಳ ಬೇಡಿಕೆ. ಈ ಹಿಂದೆ ಕೂಡ ಇದನ್ನು ಅವರು ಮೋದಿಯವರ ಮುಂದೆ ಪ್ರಸ್ತಾಪಿಸಿ, ಹೆಸರು ಬದಲಾವಣೆಗೆ ಕೋರಿದ್ದರು. ಇದೀಗ ಮತ್ತೆ ಅವರ ಜತೆ ಇದೇ ಕೋರಿಕೆಯನ್ನು ಇಟ್ಟಿರುವುದಾಗಿ ತಿಳಿದುಬಂದಿದೆ.
ಕಾಂಗ್ರೆಸ್ ಮುಖಂಡ ಆನಂದ್ ಶರ್ಮಾ ಭೇಟಿ ಮಾಡಿರುವ ಮಮತಾ ಬ್ಯಾನರ್ಜಿ, ಇಂದು ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಹಾಗೂ ಟಿಎಂಸಿ ಸಂಸದರೊಂದಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೂ ಮಾತುಕತೆ ನಡೆಸುವ ಸಾಧ್ಯತೆ ಇದೆ. ಪೆಗಾಸಸ್ ಗೂಢಚರ್ಯೆ ಬಗ್ಗೆ ಚರ್ಚೆದೇಶದ ವಿವಿಧ ಮುಖಂಡರು ಹಾಗೂ ಪತ್ರಕರ್ತರ ಮೊಬೈಲ್ ಹ್ಯಾಕಿಂಗ್ ವಿಚಾರವಾಗಿ ಕೂಡ ಈ ವೇಳೆ ಚರ್ಚೆ ನಡೆಸಿರುವ ದೀದಿ, ನ್ಯಾಯಧೀಶರ ನೇತೃತ್ವದಲ್ಲಿ ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೋರಿದ್ದಾರೆ. ಸುಪ್ರೀಂಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕು ಮಮತಾ ಒತ್ತಾಯಿಸಿದ್ದಾರೆ.