ನವದೆಹಲಿ: ಕೇಂದ್ರ ಸಚಿವ ಸಂಪುಟದಲ್ಲಿ ನೂತನ ಸಚಿವರು ಅಧಿಕಾರ ವಹಿಸಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೆ ಕೋವಿಡ್ ವ್ಯಾಕ್ಸಿನ್ ವಿಚಾರದಲ್ಲಿ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ.ಆರೋಗ್ಯ ಸಚಿವರು ಬದಲಾಗಿದ್ದು, ಕೋವಿಡ್ ವ್ಯಾಕ್ಸಿನ್ ಪೂರೈಕೆ ವಿಚಾರದಲ್ಲಿ ಬದಲಾವಣೆಯಾಗುತ್ತದೆ ಎಂಬುದು ಇದರರ್ಥವೇ..? ಎಂದು ಪ್ರಶ್ನಿಸಿದ್ದು, ಇನ್ನು ಮುಂದೆ ಕೋವಿಡ್ ವ್ಯಾಕ್ಸಿನ್ ಕೊರತೆ ಇರುವುದಿಲ್ಲವೇ? ಎಂಬರ್ಥದಲ್ಲಿ #Change ಎಂಬ ಹ್ಯಾಷ್ಟ್ಯಾಗ್ನೊಂದಿಗೆ ಟ್ವೀಟ್ ಮಾಡಿದ್ದಾರೆ.
ಕೇಂದ್ರದ ಲಸಿಕಾ ನೀತಿ ವಿರುದ್ಧ ಈ ಮೊದಲಿನಿಂದಲೂ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿದೆ. ಕೋವಿಡ್ ಲಸಿಕೆ ವಿತರಣೆ ತುಂಬಾ ವೇಗವಾಗಿ ಆಗಬೇಕೆಂದು ಆಗ್ರಹಿಸುತ್ತಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗೌರವ್ ಭಾಟಿಯಾ ರಚನಾತ್ಮಕ ಟೀಕೆಗಳಿಗೆ ಸ್ವಾಗತ ಎಂದಿದ್ದರು.ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿರ್ವಹಣೆ ಮಾಡುವಲ್ಲಿ ಹರ್ಷವರ್ಧನ್ ವಿಫಲರಾಗಿದ್ದಾರೆ ಎಂದು ಕಾಂಗ್ರೆಸ್ ಈ ಹಿಂದೆ ಆರೋಪಿಸಿತ್ತು. ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಕೂಡಾ ಹೊಸದಾಗಿ ಆಯ್ಕೆಯಾಗಿರುವ ಹೊಸ ಆರೋಗ್ಯ ಸಚಿವರು ಕೋವಿಡ್ ವ್ಯಾಕ್ಸಿನ್ ಕುರಿತು ಗಮನ ಹರಿಸಬೇಕೆಂದು ಒತ್ತಾಯಿಸಿದ್ದರು. ಈಗ ಮಾನ್ಸುಖ್ ಮಾಂಡವೀಯ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದು, ಇದರ ಜೊತೆಗೆ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ಅವರ ಅಧೀನದಲ್ಲಿಯೇ ಇದೆ.