ಬೆಂಗಳೂರು : ತಾವು ರಾಜೀನಾಮೆ ನೀಡುವಂತೆ ಹೈಕಮಾಂಡ್ ನನಗೆ ಯಾವುದೇ ಸೂಚನೆಯನ್ನೂ ಸಹ ನೀಡಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಮ್ಮೆ ಸ್ಪಷ್ಟನೆ ನೀಡಿದ್ದಾರೆ.
ಸಿಎಂ ಈ ಸ್ಪಷ್ಟನೆ ನೀಡುವ ಮುನ್ನ ಬಿಜೆಪಿ ಮೂಲಗಳು ಸಿಎಂ ರಾಜೀನಾಮೆ ನೀಡಲಿದ್ದಾರೆ ಎಂಬ ಮಾಹಿತಿ ನೀಡಿದ್ದವು. ಸಿಎಂ ಅವರು ಆರೋಗ್ಯ ಕಾರಣದಿಂದ ರಾಜೀನಾಮೆ ನೀಡುವುದಾಗಿ ಹೇಳಿದ್ದರು ಎಂದು ಬಿಜೆಪಿ ಮೂಲಗಳಿಂದ ತಿಳಿದು ಬಂದಿತ್ತು. ಆದರೆ ಪಕ್ಷ ಸೂಚಿಸಿದರೆ ಮಾತ್ರವೇ ಸಿಎಂ ರಾಜೀನಾಮೆ ನೀಡಲಿದ್ದಾರೆ ಎಂಬುದಾಗಿ ಬಿಜೆಪಿಯ ಉನ್ನತ ಮೂಲಗಳು ತಿಳಿಸಿದ್ದಾಗಿ ವರದಿಯಾಗಿತ್ತು.
ರಾಷ್ಟ್ರೀಯ ಬಿಜೆಪಿ ಮೂಲಗಳ ಈ ಮಾಹಿತಿ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಬಿಎಸ್ ಯಡಿಯೂರಪ್ಪ, ಮಾಧ್ಯಮಗಳ ಮುಂದೆ ಬಂದು ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದರಲ್ಲದೇ, ರಾಷ್ಟ್ರೀಯ ಪತ್ರಕರ್ತರ ರಾಜೀನಾಮೆ ಪ್ರಶ್ನೆಗೆ ಆತ್ಮವಿಶ್ವಾಸದಿಂದಲೇ ನಾಟ್ ಅಟ್ ಆಲ್.. ಎನ್ನುತ್ತಾ ಮುಂದೆ ಸಾಗಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮನೆಗೆ ತೆರಳುವ ಮುನ್ನ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ರಾಜೀನಾಮೆ ಸುದ್ದಿ ಸತ್ಯಕ್ಕೆ ದೂರವಾಗಿದೆ. ‘ನೋ ಟ್ರೂಥ್ ಇನ್ ಇಟ್’ ಎಂದು ಖಡಕ್ ಆಗಿ ಹೇಳಿದ್ದಾರೆ.ನವದೆಹಲಿಯಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪರಾಜೀನಾಮೆ ನೀಡುವಂತೆ ಯಾರೂ ಸೂಚಿಸಿಲ್ಲ:ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರನ್ನು ದೆಹಲಿ ನಿವಾಸದಲ್ಲಿ ಭೇಟಿಯಾದ ಬಳಿಕ ಮಾತನಾಡಿದ ಅವರು, ರಾಜೀನಾಮೆ ನೀಡುವ ಕುರಿತ ಸುದ್ದಿಗೆ ಯಾವುದೇ ಬೆಲೆ ಇಲ್ಲ. ರಾಜೀನಾಮೆ ಎಂಬ ಬಗ್ಗೆ ಒಂದೇ ಒಂದು ಶಬ್ದವೂ ಚರ್ಚೆಯಾಗಿಲ್ಲ. ರಾಜೀನಾಮೆ ನೀಡುವಂತೆ ನನಗೆ ಯಾರೂ ಸೂಚಿಸಿಲ್ಲ. ರಾಜೀನಾಮೆ ಕೊಟ್ಟರೆ ಅದನ್ನು ಮುಚ್ಚಿಡುವ ಪ್ರಶ್ನೆಯೇ ಇಲ್ಲವೆಂದು ಹೇಳುವ ಮೂಲಕ ರಾಜೀನಾಮೆ ವದಂತಿಗೆ ತೆರೆ ಎಳೆದಿದ್ದಾರೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗಿನ ಸಮಾಲೋಚನೆ ಬಳಿಕ ಮಾತನಾಡಿದ ಅವರು, ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಬಗ್ಗೆ ಚರ್ಚೆ ನಡೆದಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಗಮನಕೊಡುವಂತೆ ಸೂಚನೆ ನೀಡಿದ್ದಾರೆ. ರಾಜ್ಯ ರಾಜಕೀಯದ ಬಗ್ಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದೆವು. ಪಕ್ಷ ಬಲವರ್ಧನೆ ಮಾಡಿ, ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಹೊಣೆ ನಮ್ಮ ಮೇಲಿದೆ ಎಂದು ಹೇಳಿದ್ದಾರೆ. ಆ ಹೊಣೆಯನ್ನು ನನಗೆ ಕೊಟ್ಟಿದ್ದಾರೆ. ನಿನ್ನೆಯೂ ಅದೇ ಮಾತನ್ನು ಪ್ರಧಾನಿ ಮೋದಿ ಹೇಳಿದ್ದರು ಎಂದು ಸಿಎಂ ವಿವರಿಸಿದರು. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸಲು ದೆಹಲಿಗೆ ಬರುವುದು ನನ್ನ ಕರ್ತವ್ಯ. ಆರು ತಿಂಗಳ ಬಳಿಕ ದೆಹಲಿಗೆ ಬಂದಿದ್ದೇನೆ. ಮುಂದಿನ ತಿಂಗಳು ಮೊದಲ ವಾರ ದೆಹಲಿಗೆ ಬರಲು ಯತ್ನಿಸುತ್ತೇನೆ. ಮುಂದಿನ ದಿನಗಳಲ್ಲಿ ರಾಜ್ಯದ ಅಭಿವೃದ್ಧಿ ಕೆಲಸಕ್ಕಾಗಿ ಆಗಾಗ್ಗೆ ದೆಹಲಿಗೆ ಭೇಟಿ ನೀಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ಬಳಿಕ ಸಿಎಂ ಯಡಿಯೂರಪ್ಪ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜೀನಾಮೆ ವದಂತಿ ಅಪ್ಪಟ ಸುಳ್ಳು ; ಯಡಿಯೂರಪ್ಪ
Photo Credit :
ಹನಿ ಹನಿ ಕೂಡಿ ಹಳ್ಳ
ನ್ಯೂಸ್ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.