ಲಖನೌ: ಅಯೋಧ್ಯೆ ರಾಮಮಂದಿರ ಅಯೋಧ್ಯೆಯ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. 2024ರ ಜನವರಿ 22 ರಂದು ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆ ನೆರವೇರಲಿದೆ. ಇದಕ್ಕಾಗಿ ಮೂವರು ಶಿಲ್ಪಿಗಳು ಮೂರು ಮೂರ್ತಿಗಳ ಕೆತ್ತನೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಈ ಪೈಕಿ ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.
ರಾಜಸ್ಥಾನದ ಮಕ್ರಾನಾದ ಬಿಳಿ ಅಮೃತಶಿಲೆಯಲ್ಲಿ ಒಂದು ಮೂರ್ತಿಯನ್ನು ಕೆತ್ತಲಾಗಿದ್ದು, ಇನ್ನೆರಡು ಮೂರ್ತಿಗಳಿಗೆ ಕರ್ನಾಟಕದಿಂದ ಪಡೆದ ಕಲ್ಲುಗಳಲ್ಲಿ ಅಂತಿಮ ರೂಪ ನೀಡಲಾಗಿದೆ. ವಾಸ್ತವವಾಗಿ, ಈ ಎಲ್ಲಾ ಮೂರ್ತಿಗಳನ್ನು ಸಾರ್ವಜನಿಕರ ಕಣ್ತಪ್ಪಿಸಿ ಅಯೋಧ್ಯೆಯ ವಿವಿಧ ಸ್ಥಳಗಳಲ್ಲಿ ಕೆತ್ತಲಾಗಿದೆ.
ಕರ್ನಾಟಕದ ಶಿಲ್ಪಿಗಳಾದ ಗಣೇಶ್ ಭಟ್ ಮತ್ತು ಅರುಣ್ ಯೋಗಿರಾಜ್ ಅವರು ಶ್ಯಾಮ್ ಶಿಲಾ ಅಥವಾ ಕೃಷ್ಣ ಶಿಲಾ ಎಂದು ಹೆಸರಾಗಿರುವ ನೆಲ್ಲಿಕಾರು ಬಂಡೆ (ಕಪ್ಪು ಕಲ್ಲುಗಳು) ಮತ್ತು ಮೈಸೂರಿನ ಮತ್ತೊಂದು ಬಂಡೆಯಿಂದ ಕೆತ್ತಿದ್ದಾರೆ. ಮೂರನೇ ವಿಗ್ರಹವನ್ನು ರಾಜಸ್ಥಾನದ ಸತ್ಯ ನಾರಾಯಣ ಪಾಂಡೆ ಅವರು ಬಿಳಿ ಮಕ್ರಾನಾ ಮಾರ್ಬಲ್ ಕಲ್ಲಿನಲ್ಲಿ ಕೆತ್ತಿದ್ದಾರೆ. ಮೂವರು ಶಿಲ್ಪಿಗಳು ಪರಸ್ಪರರ ಬಗ್ಗೆ ಯಾವುದೇ ಮಾಹಿತಿಯಿಲ್ಲದೆ ವಿವಿಧ ಸ್ಥಳಗಳಲ್ಲಿ ಮೂರ್ತಿ ಕೆತ್ತನೆ ಮಾಡಿರುವುದಾಗಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮೂಲಗಳು ಹೇಳಿವೆ.
ಮೂವರೂ ಶಿಲ್ಪಿಗಳು ಮೂರ್ತಿ ಕೆತ್ತನೆ ಕೆಲಸ ಪೂರ್ಣಗೊಂಡ ಬಗ್ಗೆ ದೇವಾಲಯದ ಟ್ರಸ್ಟ್ಗೆ ತಿಳಿಸಿದ್ದಾರೆ. ಈಗ ಸಾರ್ವಜನಿಕರ ದರ್ಶನಕ್ಕಾಗಿ ಯಾವಾಗ ಪ್ರತಿಷ್ಠಾಪಿಸಲಾಗುತ್ತದೆ ಎಂಬುದನ್ನು ಟ್ರಸ್ಟ್ ನಿರ್ಧರಿಸುತ್ತದೆ ಎಂದು ಹೆಸರು ಹೇಳಲು ಇಚ್ಚಿಸದ ಟ್ರಸ್ಟ್ ನ ಸದಸ್ಯರೊಬ್ಬರು ತಿಳಿಸಿದರು.
ಮುಂದಿನ ಕೆಲವು ದಿನಗಳಲ್ಲಿ, ರಾಮ್ ಲಲ್ಲಾನ (ರಾಮನ ಮಗುವಿನ ರೂಪ) ಎಲ್ಲಾ ಮೂರು ವಿಗ್ರಹಗಳಲ್ಲಿ ಒಂದನ್ನು ‘ರಾಮನಂದಿ ಸಂಪ್ರದಾಯದ ಪ್ರಮುಖ ಸ್ವಾಮೀಜಿಗಳನ್ನೊಳಗೊಂಡ ಐವರು ಸದಸ್ಯರ ಸಮಿತಿ ಪ್ರತಿಷ್ಠಾಪನೆಗಾಗಿ ಆಯ್ಕೆ ಮಾಡುತ್ತದೆ.