ನವದೆಹಲಿ: ಲೋಕಸಭೆಯ ಭದ್ರತಾ ಲೋಪಕ್ಕೂ ಸದನದಿಂದ ಸಂಸದರ ಅಮಾನತಿಗೂ ಸಂಬಂಧವಿಲ್ಲ. ಕಲಾಪ ನಡೆಸಲು ಬಿಡದೇ ಅಡ್ಡಿಯುಂಟುಮಾಡುವ ಮೂಲಕ ಸದನದ ಘನತೆಗೆ ಚ್ಯುತಿ ಬರುವಂತೆ ಮಾಡಿದ್ದಕ್ಕಾಗಿ ಸಂಸದರನ್ನು ಅಮಾನತು ಮಾಡಲಾಗಿದೆ ಎಂದು ಸ್ಪೀಕರ್ ಓಂ ಬಿರ್ಲಾ ಪತ್ರದ ಮೂಲಕ ಸ್ಪಷ್ಟ ಪಡಿಸಿದ್ದಾರೆ.
14 ಮಂದಿ ಸಂಸದರನ್ನು ಕಲಾಪದಿಂದ ಅಮಾನತುಗೊಳಿಸಿದ ಬಗ್ಗೆ ಸ್ಪೀಕರ್ ಓಂ ಬಿರ್ಲಾ ಅವರು ಸಂಸದರನ್ನು ಉದ್ದೇಶಿಸಿ ಪತ್ರ ಬರೆದಿರುವ ಅವರು, ಭದ್ರತಾ ಲೋಪಕ್ಕೆ ಸಂಬಂಧಿಸಿ ಉನ್ನತ ಮಟ್ಟದ ತನಿಖಾ ಸಮಿತಿ ರಚನೆ ಮಾಡಲಾಗಿದೆ. ಕಲಾಪವನ್ನು ನಡೆಸಲು ಎಲ್ಲ ಸದಸ್ಯರು ಸಹಕಾರ ನೀಡಬೇಕು ಎಂದು ಪತ್ರದ ಮೂಲಕ ಮನವಿ ಮಾಡಿದ್ದಾರೆ.
‘ಸದನದ ಕಲಾಪದಲ್ಲಿ ಅನುಚಿತ ವರ್ತನೆ ಮತ್ತು ಅಡ್ಡಿಗಳನ್ನು ನಮ್ಮ ದೇಶದ ಜನರು ಮೆಚ್ಚುವುದಿಲ್ಲ ಎಂಬುದು ನಮಗೆ ಚೆನ್ನಾಗಿ ತಿಳಿದಿದೆ. ಅದಕ್ಕಾಗಿಯೇ ನಾವು ಸಂಸದೀಯ ಸೌಹಾರ್ದತೆ ಮತ್ತು ಘನತೆಯ ಉನ್ನತ ಗುಣಮಟ್ಟವನ್ನು ಕಾಪಾಡುತ್ತೇವೆ ಎಂದು ಸರ್ವಾನುಮತದಿಂದ ಹೇಳಿದ್ದೇವೆ. ಈ ಹಿನ್ನೆಲೆಯಲ್ಲಿ ಸದನದಲ್ಲಿ ಗೌರವಾನ್ವಿತ ಸದಸ್ಯರನ್ನು ಅಮಾನತುಗೊಳಿಸುವ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಇದು ನನಗೆ ತೀವ್ರ ವೇದನೆಯನ್ನು ಉಂಟು ಮಾಡಿದೆಯಾದರೂ, ಭವಿಷ್ಯದಲ್ಲಿ, ಎಲ್ಲಾ ಗೌರವಾನ್ವಿತ ಸದಸ್ಯರು ಸದನದ ಘನತೆ ಮತ್ತು ಸೌಹಾರ್ದತೆಗೆ ಪ್ರಾಧಾನ್ಯತೆಯನ್ನು ನೀಡುತ್ತಾರೆ ಎಂದು ನಿರೀಕ್ಷಿಸುತ್ತೇನೆ. ಲೋಕಸಭೆಯ ಸ್ಪೀಕರ್ ಆಗಿ, ಇದು ಅರ್ಥಪೂರ್ಣವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಯಾವಾಗಲೂ ನನ್ನ ಪ್ರಯತ್ನವಾಗಿದೆ. ರಚನಾತ್ಮಕ ಸಂವಾದ ಮತ್ತು ಎಲ್ಲಾ ಸದಸ್ಯರ ಭಾಗವಹಿಸುವಿಕೆಯ ಮೂಲಕ ಸದನದಲ್ಲಿ ಚರ್ಚೆ ನಡೆಯಲಿ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.