ಲಖನೌ: ದೇಶವಾಸಿಗಳು ಭಕ್ತಿಯಿಂದ ಕಾಯತ್ತಿರುವ ರಾಮಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ರಾಮನ ಮೂರ್ತಿ ಪ್ರತಿಷ್ಠಾಪಿಸುವ 10 ದಿನಗಳ ಆಚರಣೆಗಳು ಮುಂದಿನ ವರ್ಷ ಜನವರಿ 16 ರಂದು ಪ್ರಾರಂಭವಾಗಲಿದ್ದು, ಜನವರಿ 22 ರಂದು ಮಧ್ಯಾಹ್ನ 12-45 ರಿಂದ 1 ಗಂಟೆ ನಡುವೆ ‘ಶುಭ ಮುಹೂರ್ತ’ ನಡೆಯಲಿದೆ.
ದೇಶಾದ್ಯಂತದ 140 ವಿವಿಧ ಪಂಗಡಗಳ 4,000 ಸಂತರು ಮತ್ತು ಪುರೋಹಿತರು ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಹೆಚ್ಚುವರಿಯಾಗಿ ಹುತಾತ್ಮ ಯೋಧರು ಮತ್ತು ಕರಸೇವಕರ ಕುಟುಂಬಗಳೊಂದಿಗೆ ವಿವಿಧ ಪ್ರದೇಶಗಳಿಂದ 2,500 ಗಣ್ಯರನ್ನು ಆಹ್ವಾನಿಸಲಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಿಳಿಸಿದ್ದಾರೆ.
ವಾರಣಾಸಿಯ ವೈದಿಕರಾದ ಲಕ್ಷ್ಮೀಕಾಂತ ದೀಕ್ಷಿತ್ ಜನವರಿ 22 ರಂದು ರಾಮಲಲ್ಲಾ ಪಟ್ಟಾಭಿಷೇಕದ ಮುಖ್ಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ.