ಲಕ್ನೋ: ಮಹತ್ವದ ಬೆಳವಣಿಗೆಯೊಂದರಲ್ಲಿ ಜ್ಞಾನವಾಪಿ ಮಸೀದಿ ಇರುವ ಜಾಗದಲ್ಲಿ ಹಿಂದೂ ಮಂದಿರ ಸ್ಥಾಪನೆ ಕೋರಿ ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆ ನಡೆಸಬಾರದು ಎಂದು ಕೋರಿ ಮುಸ್ಲಿಮರು ಸಲ್ಲಿಸಿದ್ದ ಐದು ಅರ್ಜಿಗಳನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದೆ.
ಉತ್ತರ ಪ್ರದೇಶದ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಮತ್ತು ಜ್ಞಾನವಾಪಿ ಮಸೀದಿ ಸಮಿತಿ ಸಲ್ಲಿಸಿದ ಐದು ಅರ್ಜಿಗಳನ್ನು ವಜಾಗೊಳಿಸಿದ ಕೋರ್ಟ್ ಜ್ಞಾನವಾಪಿ ವಿವಾದದಲ್ಲಿನ ಅರ್ಜಿಯನ್ನು ಪೂಜಾ ಸ್ಥಳಗಳ ಕಾಯ್ದೆಯ ನಿಬಂಧನೆಗಳಿಂದ ತಡೆಯುವುದಿಲ್ಲ ಎಂದು ಹೇಳಿದೆ.
ಈ ಪ್ರಕರಣವು ರಾಷ್ಟ್ರೀಯ ಪ್ರಾಮುಖ್ಯತೆ ಮತ್ತು ದೇಶದ ಎರಡು ಪ್ರಮುಖ ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಾಲಯ ಹೇಳಿದೆ. ಅಷ್ಟೇ ಅಲ್ಲದೇ ಆರು ತಿಂಗಳೊಳಗೆ ವಿಷಯವನ್ನು ತ್ವರಿತವಾಗಿ ವಿಚಾರಣೆ ನಡೆಸಿ ಮುಕ್ತಾಯಗೊಳಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶನ ನೀಡಿದೆ.
ಪೂಜಾ ಸ್ಥಳಗಳ ಕಾಯ್ದೆ “ಧಾರ್ಮಿಕ ಸ್ವರೂಪ” ವನ್ನು ವ್ಯಾಖ್ಯಾನಿಸುವುದಿಲ್ಲ. “ಮತಾಂತರ” ಮತ್ತು “ಆರಾಧನಾ ಸ್ಥಳ”ಗಳನ್ನು ಮಾತ್ರ ಕಾಯಿದೆಯಡಿಯಲ್ಲಿ ವ್ಯಾಖ್ಯಾನಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ವಿವಾದಿತ ಸ್ಥಳದ ಧಾರ್ಮಿಕ ಸ್ವರೂಪ ಏನು ಎಂಬುದಕ್ಕೆ ಕಕ್ಷಿದಾರರು ನೀಡಿದ ಪುರಾವೆಯ ನಂತರವೇ ನ್ಯಾಯಾಲಯವು ತೀರ್ಮಾನ ತೆಗೆದುಕೊಳ್ಳಬಹುದು. ಅಗತ್ಯವಿದ್ದಲ್ಲಿ ಎಎಸ್ಐ ಮತ್ತೊಮ್ಮೆ ಸಮೀಕ್ಷೆ ನಡೆಸಬಹುದು ಎಂದು ತನ್ನ ಆದೇಶದಲ್ಲಿ ತಿಳಿಸಿದೆ.