ಲಕ್ನೋ: ಉತ್ತರ ಪ್ರದೇಶದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಕಳೆದ 24 ಗಂಟೆಗಳಲ್ಲಿ 36 ಮಂದಿ ಬಲಿಯಾಗಿದ್ದಾರೆ. ಜೀವಹಾನಿಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ರೂಪಾಯಿ ಪರಿಹಾರ ಮೊತ್ತವನ್ನು ತಕ್ಷಣವೇ ವಿತರಿಸಲು ಮತ್ತು ವಿವಿಧ ಪ್ರಕೃತಿ ವಿಕೋಪಗಳಲ್ಲಿ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ನೀಡಲು ಸೂಚನೆ ನೀಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಸರಾಸರಿಗಿಂತ ಶೇಕಡಾ 11 ರಷ್ಟು ಅಧಿಕ ಮಳೆಯಾಗಿದೆ. ಅಲ್ಲದೆ ನದಿಗಳಲ್ಲಿ ನೀರಿನ ಮಟ್ಟ ಏರಿಕೆಯಅಗಿದೆ. ನೈಸರ್ಗಿಕ ವಿಕೋಪ ಪರಿಹಾರ ಆಯುಕ್ತರ ಕಚೇರಿಯ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಸಿಡಿಲು ಬಡಿದು 17 ಮಂದಿ, ನೀರಿನಲ್ಲಿ ಮುಳುಗಿ 12 ಮಂದಿ ಮತ್ತು ಭಾರೀ ಮಳೆಗೆ ಏಳು ಮಂದಿ ಸಾವನ್ನಪ್ಪಿದ್ದಾರೆ. ಭಾರತೀಯ ಮಾಪನಶಾಸ್ತ್ರ ಇಲಾಖೆ (IMD) ಅಂಕಿಅಂಶಗಳ ಪ್ರಕಾರ, ರಾಜ್ಯದ 75 ಜಿಲ್ಲೆಗಳ ಪೈಕಿ ಸುಮಾರು 68 ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 8.7 ಮಿಮೀ ಮಳೆಯಾಗಿತ್ತು. ಆದರೆ ಈ ಬಾರಿ 13.6 ಮಿಮೀ, ಹವಾಮಾನ ಮಾಹಿತಿ ತೋರಿಸಿದೆ.
ಮುಜಾಫರ್ನಗರದಲ್ಲಿ ಗರಿಷ್ಠ 67.4 ಮಿಮೀ ಮಳೆಯಾಗಿದ್ದು, ಮೀರತ್ನಲ್ಲಿ 56 ಮಿಮೀ, ನಜೀಬಾಬಾದ್ನಲ್ಲಿ 42 ಮಿಮೀ, ಝಾನ್ಸಿಯಲ್ಲಿ 39 ಮಿಮೀ ಮತ್ತು ಅಲಿಗಢದಲ್ಲಿ 25 ಮಿಮೀ ಮಳೆಯಾಗಿದೆ.
ಮಳೆ-ಸಂಬಂಧಿತ ಘಟನೆಗಳಲ್ಲಿ ಇಟಾವಾ, ಉನ್ನಾವೋ, ಆಗ್ರಾ ಮತ್ತು ಬಲ್ಲಿಯಾದಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಜಲೌನ್, ಕಾನ್ಪುರ್ ದೇಹತ್, ಕನೌಜ್ ಮತ್ತು ಗಾಜಿಪುರದಲ್ಲಿ ತಲಾ ಎರಡು, ಮತ್ತು ಮಿಂಚಿನಿಂದಾಗಿ ಮೈನ್ಪುರಿಯಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಅದೇ ರೀತಿ, ಸಂತ ಕಬೀರ್ ನಗರದಲ್ಲಿ ಒಬ್ಬರು, ಬದೌನ್ನಲ್ಲಿ ಎರಡು, ಬರೇಲಿಯಲ್ಲಿ ನಾಲ್ಕು ಮತ್ತು ರಾಯ್ ಬರೇಲಿಯಲ್ಲಿ ಐದು ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇಟಾಹ್, ಕನ್ನೌಜ್ ಮತ್ತು ಕೌಶಂಬಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದಾಗಿ ಮುಜಾಫರ್ನಗರದಲ್ಲಿ ಇನ್ನೆರಡು ಸಾವು ನೋವುಗಳು ವರದಿಯಾಗಿವೆ.