ಉತ್ತರಪ್ರದೇಶ: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಎರಡನೇ ಬಾರಿಗೆ ಅಯೋಧ್ಯೆಗೆ ಭೇಟಿ ನೀಡಿದ್ದಾರೆ. ಇತ್ತೀಚೆಗೆ ಹೊಸದಾಗಿ ಉದ್ಘಾಟನೆಗೊಂಡ ರಾಮಮಂದಿರಕ್ಕೆ ಅವರು ಮತ್ತೊಮ್ಮೆ ಭೇಟಿ ನೀಡುವ ಸಾಧ್ಯತೆ ಇದೆ. ಆಭರಣ ಮಳಿಗೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವರು ನಗರಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಇನ್ನು ಮಹರ್ಷಿ ವಾಲ್ಮೀಕಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಅಯೋಧ್ಯಾ ಧಾಮ್ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈವೆಂಟ್ನಲ್ಲಿ ‘ಬಿಗ್ ಬಿ’ ಅವರು ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಬಹುದು. ಕಳೆದ ತಿಂಗಳು ಪ್ರಾಣ ಪ್ರತಿಷ್ಠಾಪನೆಯಲ್ಲಿ ಅಮಿತಾಭ್ ಬಚ್ಚನ್ ಭಾಗವಹಿಸಿದ್ದರು. ಪುತ್ರ ಅಭಿಷೇಕ್ ಬಚ್ಚನ್ ಜೊತೆ ಅವರು ಸಮಾರಂಭಕ್ಕೆ ಬಂದಿದ್ದರು.
ಅಯೋಧ್ಯೆಯಲ್ಲಿ ರಾಮಮಂದಿರ ಜನವರಿ 22ರಂದು ಉದ್ಘಾಟನೆಗೊಂಡಿತು. ಹಲವಾರು ಬಾಲಿವುಡ್ ಸೆಲೆಬ್ರಿಟಿಗಳು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳು, ಹೆಸರಾಂತ ಕಲಾವಿದರು ಮತ್ತು ಉದ್ಯಮಿಗಳು ಉಪಸ್ಥಿತರಿದ್ದರು. ತಿಂಗಳು ಕಳೆಯುವುದರೊಳಗೆ ಅಯೋಧ್ಯೆಗೆ ಅಮಿತಾಭ್ ಬಚ್ಚನ್ ಅವರು ಎರಡನೇ ಬಾರಿಗೆ ಭೇಟಿ ನೀಡಿರುವುದು ವಿಶೇಷ.