ಲಖನೌ : ಭಾರತದ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಹೊರಹೊಮ್ಮಲಿರುವ ಅಯೋಧ್ಯಾ ನಗರದ ಫೈಜಾಬಾದ್ ರೈಲ್ವೇ ಜಂಕ್ಷನ್ಗೆ ‘ಅಯೋಧ್ಯ ಕ್ಯಾಂಟ್’ ಎಂದು ಪುನರ್ನಾಮಕರಣ ಮಾಡಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂದಾಗಿದ್ದಾರೆ. ಇದು ರಾಜ್ಯದ ಪ್ರಮುಖ ನಗರಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು ಹಿಂದೂ ಇತಿಹಾಸ ಮತ್ತು ಪರಂಪರೆಗೆ ಅನುಸಾರವಾಗಿ ಹೆಸರಿಸುವ ಅವರ ಪ್ರಯತ್ನದ ಭಾಗವಾಗಿದೆ.
2022ರ ವಿಧಾನಸಭಾ ಚುನಾವಣೆಯ ಬಿಸಿ ಏರುತ್ತಿರುವ ಸಂದರ್ಭದಲ್ಲಿ ಬಿಜೆಪಿ ಸರ್ಕಾರದ ಈ ಹೆಸರು ಬದಲಾವಣೆಯ ನಿರ್ಧಾರವು ಪ್ರಮುಖ ರಾಜಕೀಯ ಬೆಳವಣಿಗೆ ಎಂದು ಪರಿಗಣಿಸಲ್ಪಡುತ್ತಿದೆ. ಈ ನಿರ್ಧಾರವನ್ನು ಟ್ವೀಟ್ ಮುಖಾಂತರ ಪ್ರಕಟಿಸಿರುವ ಸಿಎಂ ಯೋಗಿ, ಈ ಬಗೆಗಿನ ಅಧಿಕೃತ ಅಧಿಸೂಚನೆಯನ್ನು ಕೇಂದ್ರ ಸರ್ಕಾರದ ಅನುಮೋದನೆಯ ನಂತರ ಹೊರಡಿಸಲಾಗುವುದು ಎಂದಿದ್ದಾರೆ.
ಕಳೆದ ವಾರವಷ್ಟೇ, ಏಐಎಂಐಎಂ ಅಧ್ಯಕ್ಷ ಅಸಾವುದ್ದೀನ್ ಓವೈಸಿ ಅವರ ಭೇಟಿಯ ಸಮಯದಲ್ಲಿ ಅಯೋಧ್ಯಾಗೆ ಮುಂಚಿನ ಹೆಸರಾದ ಫೈಜಾಬಾದ್ ಎಂದು ಬಳಸಿದ್ದ ಪೋಸ್ಟರ್ಗಳನ್ನು ತೆಗೆದುಹಾಕುವಂತೆ ಯುಪಿ ಪೊಲೀಸರು ಆದೇಶ ಹೊರಡಿಸಿದ್ದರು. ರಾಮಜನ್ಮಭೂಮಿ ಎಂದು ನಂಬಲಾದ ಅಯೋಧ್ಯ ನಗರ ಇರುವ ಫೈಜಾಬಾದ್ ಜಿಲ್ಲೆಗೆ 2018 ರಲ್ಲಿ ಅಯೋಧ್ಯ ಜಿಲ್ಲೆ ಎಂದು ಯೋಗಿ ಸರ್ಕಾರವೇ ಹೆಸರು ಬದಲಿಸಿತ್ತು.