ವಾರಾಣಸಿ: ಉತ್ತರ ಪ್ರದೇಶದ ವಿವಾದಿತ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ಮಾತಾ ಶೃಂಗಾರ್ ಗೌರಿ ಮತ್ತು ಇತರ ದೇವರುಗಳ ಮೂರ್ತಿಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಐದು ಹಿಂದೂ ಮಹಿಳೆಯರು ಸಲ್ಲಿಸಿದ ಅರ್ಜಿಯನ್ನು ವಾರಾಣಸಿ ನ್ಯಾಯಾಲಯವು ವಿಚಾರಣೆಗೆ ಅಂಗೀಕರಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಮತ್ತು ಇತರರಿಂದ ನ್ಯಾಯಾಲಯ ಪ್ರತಿಕ್ರಿಯೆ ಕೇಳಿದೆ.
ಮಹಿಳೆಯರು ತಮ್ಮ ಅರ್ಜಿಯಲ್ಲಿ ಹಳೆಯ ಕಾಶಿ ವಿಶ್ವನಾಥ-ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿರುವ ದೇವರು, ದೇವತೆಗಳ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ನಾವು ಅರ್ಹರು. ಆದರೆ, ಈವರೆಗೆ ತಮ್ಮ ಹಕ್ಕುಗಳನ್ನು ನಿರಾಕರಿಸಲಾಗಿದೆ ಎಂದು ವಾದಿಸಿದ್ದಾರೆ. ದೇವತೆಗಳ ವಿಗ್ರಹಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಲು ಸಂಬಂಧಿತ ಅಧಿಕಾರಿಗಳಿಗೆ ಮತ್ತು ಜ್ಞಾನವಾಪಿ ಮಸೀದಿ ನಿರ್ವಹಣಾ ಸಮಿತಿಗೆ ನ್ಯಾಯಾಲಯ ನಿರ್ದೇಶನ ನೀಡಬೆಕೆಂದೂ ಸಹ ಅವರು ಕೋರಿದ್ದಾರೆ.
ಈ ಕುರಿತಂತೆ ರಾಜ್ಯ ಸರ್ಕಾರ, ಕಾಶಿ ವಿಶ್ವನಾಥ ಟ್ರಸ್ಟ್ ಮತ್ತು ಜ್ಞಾನವಾಪಿ ಮಸೀದಿ ನಿರ್ವಹಣಾ ಸಮಿತಿ ಮತ್ತು ಇತರ ಅಧಿಕಾರಿಗಳಿಂದ ಪ್ರತಿಕ್ರಿಯೆ ಕೇಳಿರುವ ಹಿರಿಯ ಸಿವಿಲ್ ನ್ಯಾಯಾಧೀಶ ರವಿಕುಮಾರ್ ದಿವಾಕರ್, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 10ಕ್ಕೆ ನಿಗದಿಪಡಿಸಿದ್ದಾರೆ. ಮೊಘಲ್ ದೊರೆ ಔರಂಗಜೇಬನು ಎರಡು ಸಾವಿರ ವರ್ಷಗಳ ಹಿಂದೆ ನಿರ್ಮಿಸಿದ ಕಾಶಿ ವಿಶ್ವನಾಥ ದೇವಸ್ಥಾನವನ್ನು ನೆಲಸಮಗೊಳಿಸಿದ್ದಾನೆ ಮತ್ತು ಜ್ಞಾನವಾಪಿ ಮಸೀದಿ ಕೂಡ ದೇವಾಲಯದ ಒಂದು ಭಾಗವಾಗಿತ್ತು ಎಂದು ಹಿಂದೂಗಳು ವಾದಿಸುತಿದ್ದು ಇದಕ್ಕೆ ಪೂರಕವಾಗಿ ಮಸೀದಿಯ ಹಿಂಭಾಗದ ಗೋಡೆಗಳಲ್ಲಿ ಹಿಂದೂ ಕೆತ್ತನೆಗಳು ಕಲ್ಲಿನ ಕಂಬಗಳು ಇರುವುದು ಕಾಣಬಹುದು.