ಉತ್ತರ ಪ್ರದೇಶ: ಘಾಜಿಯಾಬಾದ್ ಪೊಲೀಸರು ಕುಖ್ಯಾತ ಪಾತಕಿಗಳನ್ನು ಕೌಂಟರ್ ನಡೆಸಿ ಹತ್ಯೆಗೈದಿದ್ದಾರೆ. ಬಿಲ್ಲು ದುಜಾನಾ ಅಲಿಯಾಸ್ ಅವನೀಶ್ ಮತ್ತು ಆತನ ಸಹಚರ ರಾಕೇಶ್ ದುಜಾನಾ ಹತ್ಯೆಗೀಡಾದ ಕುಖ್ಯಾತ ಅಪರಾಧಿಗಳು.
ಏಪ್ರಿಲ್ 20 ರಂದು ದೆಹಲಿಯ ಗ್ರೇಟರ್ ನೋಯ್ಡಾದ ಕವಿನಗರ ಪ್ರದೇಶದ ವೇವ್ ಸಿಟಿಯಲ್ಲಿ ಇಬ್ಬರು ಯುವಕರ ಜೋಡಿ ಕೊಲೆ ನಡೆಸಿ ಇಬ್ಬರು ಹಂತಕರು ತಲೆಮರೆಸಿಕೊಂಡಿದ್ದರು.
ಮೂಲಗಳ ಪ್ರಕಾರ, ಬಿಲ್ಲು ದುಜಾನಾ ತಲೆಗೆ 1 ಲಕ್ಷ ರೂಪಾಯಿ ಬಹುಮಾನವನ್ನು ಘೋಷಿಸಲಾಗಿತ್ತು. ಈತ ದೆಹಲಿ ಜೈಲಿನೊಳಗಿದ್ದಾಗಲೇ ತನ್ನ ಸಹಚರರ ಮೂಲಕ ಮದನ್ ಸ್ವೀಟ್ಸ್ ಎಂಬ ರೆಸ್ಟೋರೆಂಟ್ ಮಾಲೀಕನಿಂದ ಎರಡು ಕೋಟಿ ರೂ ಸುಲಿಗೆ ಯತ್ನ ನಡೆಸಿದ ಆರೋಪವೂ ಇದೆ. ಮಾಲೀಕರು ಮೊತ್ತವನ್ನು ನೀಡಲು ವಿಫಲವಾದಾಗ, ಆತನ ರೆಸ್ಟೋರೆಂಟ್ ಮೇಲೆ ಬಿಲ್ಲುನ ಜನರು ದಾಳಿ ಮಾಡಿದ್ದರು.
2021 ರ ಅಕ್ಟೋಬರ್ನಲ್ಲಿ ದೆಹಲಿಯ ಮಂಡೋಲಿ ಜೈಲಿನಿಂದ ಬಿಲ್ಲು ದುಜಾನಾ ಪೆರೋಲ್ ಮೇಲೆ ಹೊರಬಂದಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಮತ್ತೊಂದೆಡೆ, ರಾಕೇಶ್ ದುಜಾನಾ ತನ್ನ ತಲೆಯ ಮೇಲೆ 50,000 ರೂ.ಗಳ ಬಹುಮಾನವನ್ನು ಹೊಂದಿದ್ದ. ಅವನ ವಿರುದ್ಧ 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಇಂದಿರಾಪುರಂ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ಬಿಲ್ಲು ಬಲಿಯಾಗಿದ್ದಾನೆ. ಮಧುಬನ್ ಬಾಪುಧಾಮ್ ಪೊಲೀಸರ ಎನ್ಕೌಂಟರ್ನಲ್ಲಿ ರಾಕೇಶ್ ಹತ್ಯೆಯಾಗಿದ್ದಾನೆ ಎಂದು ಗಾಜಿಯಾಬಾದ್ ಎಸ್ಎಸ್ಪಿ ಮುನಿರಾಜ್ ಮಾಹಿತಿ ನೀಡಿದ್ದಾರೆ.