38 ವರ್ಷದ ಉದ್ಯಮಿ ಹತ್ಯೆ ಮಾಡಿದ ಆರೋಪ 6 ಮಂದಿ ಪೊಲೀಸರ ಮೇಲೆ ಕೇಳಿ ಬಂದಿದೆ. ಆರೋಪ ಬಂದಿರುವ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ ಎಂದು ಗೋರಖ್ ಪುರ ಎಸ್ಎಸ್ ಪಿ ವಿಪಿನ್ ತಾಡಾ ತಿಳಿಸಿದ್ದಾರೆ.
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸಹ ಸಂತ್ರಸ್ತ ಕುಟುಂಬದ ಜತೆ ಮಾತನಾಡಿದ್ದಾರೆ. ಹೊಟೆಲ್ ಮೇಲೆ ಪೊಲೀಸರು ದಾಳಿ ಮಾಡಿದ್ದ ವೇಳೆ ಉದ್ಯಮಿ ಮನೀಶ್ ಕುಮಾರ್ ಗುಪ್ತಾ ಗಂಭೀರ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.
ಗುಪ್ತಾ ಮತ್ತು ಅವರ ಸ್ನೇಹಿತರು ಕಾರ್ಯದ ನಿಮಿತ್ತ ಆಗಮಿಸಿದ್ದು ಹೋಟೆಲ್ ನಲ್ಲಿ ತಂಗಿದ್ದರು. ಈ ನಡುವೆ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಹತ್ತು ಲಕ್ಷ ರೂ. ಪರಿಹಾರ ಘೋಷಣೆ ಮಾಡಲಾಗಿದೆ. ಹೋಟೆಲ್ ಮಹಡಿಯಿಂದ ಬಿದ್ದು ಗುಪ್ತಾ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.’
ಸಾವನ್ನಪ್ಪಿದ ವ್ಯಾಪಾರಿಯ ಪತ್ನಿ ನೀಡಿದ ದೂರಿನ ಆಧಾರದಲ್ಲಿ ಎಫ್ಐಆರ್ ಅನ್ನು ದಾಖಲು ಮಾಡಲಾಗಿದೆ,” ಎಂದು ತಿಳಿಸಿದ್ದಾರೆ. ಇನ್ನು ಆರು ಪೊಲೀಸರ ವಿರುದ್ದ ಕೊಲೆ ಪ್ರಕರಣವನ್ನು ದಾಖಲು ಮಾಡಲಾಗಿದೆ ಎಂದು ಕೂಡಾ ಪೊಲೀಸರು ಖಚಿತ ಪಡಿಸಿದ್ದಾರೆ. ಪ್ರಕರಣದ ಕುರಿತು ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ಎನ್ ಕೌಂಟರ್ ಸಂಸ್ಕೃತಿ ತೋರಿಸುತ್ತಿದೆ ಎಂದು ಆರೋಪಿಸಿದ್ದಾರೆ.