ಹೈದರಾಬಾದ್: ನಿಜಾಮಾಬಾದ್ ಜಿಲ್ಲೆಯಲ್ಲಿ ಮನೆಯೊಂದರಲ್ಲಿ ಚಾರ್ಜ್ನಲ್ಲಿ ಇರಿಸಲಾಗಿದ್ದ ಎಲೆಕ್ಟ್ರಿಕ್ ಸ್ಕೂಟರ್ನ ಡಿಟ್ಯಾಚೇಬಲ್ ಬ್ಯಾಟರಿ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡ ಪರಿಣಾಮ 80 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡ ಘಟನೆ ತೆಲಂಗಾಣದ ನಡೆದಿದೆ.
ಬುಧವಾರ ರಾತ್ರಿ ಬ್ಯಾಟರಿ ಚಾರ್ಜ್ ಮಾಡುವಾಗ ಈ ಘಟನೆ ನಡೆದಿದೆ. 80 ವರ್ಷದ ರಾಮಸ್ವಾಮಿ ಎಂಬ ವ್ಯಕ್ತಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಅವರ ಮಗ ಪ್ರಕಾಶ್, ಪತ್ನಿ ಕಮಲಮ್ಮ ಮತ್ತು ಸೊಸೆ ಕೃಷ್ಣವೇಣಿ ಗಾಯಗೊಂಡಿದ್ದಾರೆ.
ಪ್ರಕಾಶ್ ಅವರು ಕಳೆದೊಂದು ವರ್ಷಗಳಿಂದ ಎಲೆಕ್ಟ್ರಿಕ್ ಸ್ಕೂಟರ್ ಬಳಸುತ್ತಿದ್ದರು. ತಯಾರಕರ ವಿರುದ್ಧ ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ.
ಬಳಕೆದಾರರು ತಮ್ಮ ಡೇಟಾಬೇಸ್ನಲ್ಲಿ ಈ ವಾಹನ ಅಥವಾ ಸೇವೆಯ ಮಾರಾಟದ ಯಾವುದೇ ದಾಖಲೆಯನ್ನು ಹೊಂದಿಲ್ಲ ಮತ್ತು ವಾಹನವನ್ನು ಸೆಕೆಂಡ್ ಹ್ಯಾಂಡ್ ಮಾರಾಟದ ಮೂಲಕ ಖರೀದಿಸಲಾಗಿದೆಯೇ ಎಂದು ಪರಿಶೀಲಿಸುತ್ತಿದೆ ಎಂದು ವಾಹನ ತಯಾರಕ ಸಂಸ್ಥೆ ಹೇಳಿದೆ.
ತನಿಖೆಗೆ ಸಮಿತಿ: ಇತ್ತೀಚಿನ ದಿನಗಳಲ್ಲಿ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳು ಸ್ಫೋಟಗೊಳ್ಳುತ್ತಿರುವ ಘಟನೆಗಳನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ, ಇಂಥ ಘಟನೆಗಳನ್ನು ತಡೆಯಲು ತಜ್ಞರ ಸಮಿತಿ ರಚಿಸುವುದಾಗಿ ತಿಳಿಸಿದ್ದಾರೆ.
ಜತೆಗೆ ಪರಿಹಾರ ಕ್ರಮಗಳನ್ನು ಸೂಚಿಸುವಂತೆಯೂ ಆದೇಶ ನೀಡಿದ್ದಾರೆ. ಇದರ ಜತೆಗೆ ವಾಹನ ಉತ್ಪಾದಕರಿಗೆ ಸುರಕ್ಷತಾ ಕ್ರಮಗಳನ್ನು ಅನುಸರಿ ಸುವ ಬಗ್ಗೆ ಎಚ್ಚರಿಕೆ ನೀಡಲಾಗುತ್ತದೆ. ಉಲ್ಲಂಘಿಸುವ ಕಂಪನಿಗಳ ವಿರುದ್ಧ ದಂಡ ವಿಧಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.