ಚೆನ್ನೈ: ತಮಿಳುನಾಡಿನಿಂದ ರಾಜ್ಯಸಭೆಗೆ ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಸೇರಿ ಎಲ್ಲಾ ಆರು ಅಭ್ಯರ್ಥಿಗಳೂ ಅವಿರೋಧವಾಗಿ ಶುಕ್ರವಾರ ಆಯ್ಕೆಯಾಗಿದ್ದಾರೆ.
ಪಿ. ಚಿದಂಬರಂ (ಕಾಂಗ್ರೆಸ್), ಥಾಂಜೈ ಎಸ್. ಕಲ್ಯಾಣಸುಂದರಂ, ಆರ್. ಗಿರಿರಾಜನ್ ಮತ್ತು ಕೆ.ಆರ್.ಎನ್. ರಾಜೇಶ್ ಕುಮಾರ್ (ಡಿಎಂಕೆ), ಸಿ. ವೆ. ಷಣ್ಮುಗಂ ಮತ್ತು ಆರ್. ಧರ್ಮಾರ್ (ಎಐಎಡಿಎಂಕೆ) ಅವರು ತಮಿಳುನಾಡಿನಿಂದ ಆಯ್ಕೆ ಆಗಿದ್ದಾರೆ. ರಾಜ್ಯಸಭೆ ಸದಸ್ಯರಾಗಿ ಚಿದಂಬರಂ ಅವರಿಗೆ ಇದು ಎರಡನೇ ಅವಧಿ. ಮೊದಲ ಅವಧಿಯಲ್ಲಿ ಅವರು ಮಹಾರಾಷ್ಟ್ರದಿಂದ ಆಯ್ಕೆ ಆಗಿದ್ದರು.
ನಾಮಪತ್ರಗಳನ್ನು ಹಿಂಪಡೆಯಲು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ವರೆಗೆ ಸಮಯಾವಕಾಶ ನಿಗದಿಪಡಿಸಲಾಗಿತ್ತು. ಅವಧಿ ಮುಗಿದ ಬಳಿಕ ಅವಿರೋಧವಾಗಿ ಆಯ್ಕೆ ಆಗಿರುವ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಲಾಯಿತು. ಪಂಜಾಬ್ನಿಂದ ಆಮ್ ಆದ್ಮಿ ಪಕ್ಷದ (ಎಎಪಿ) ಬಲ್ಬೀರ್ ಸಿಂಗ್ ಸೀಚೆವಾಲ್ ಮತ್ತು ವಿಕ್ರಂಜಿತ್ ಸಿಂಗ್ ಸಹ್ನೆ ಅವರು ಅವಿರೋಧವಾಗಿ ಆಯ್ಕೆ ಆದರು.
ಆಂಧ್ರ ಪ್ರದೇಶದ ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ನ ನಾಲ್ವರು ಅಭ್ಯರ್ಥಿಗಳು ಆಯ್ಕೆ ಆದರು. ವಿ. ವಿಜಯಸಾಯಿ ರೆಡ್ಡಿ, ಬೀಡಾ ಮುಸ್ತಾನ್ ರಾವ್, ಆರ್. ಕೃಷ್ಣಯ್ಯ ಮತ್ತು ನಿರಂಜನ್ ರೆಡ್ಡಿ ಅವರು ಆಯ್ಕೆ ಆದವರು. ಜಾರ್ಖಂಡ್ನಿಂದ ಜಾರ್ಖಂಡ್ ಮುಕ್ತಿ ಮೋರ್ಚಾದ (ಜೆಎಂಎಂ) ಅಭ್ಯರ್ಥಿ ಮಹುವಾ ಮಾಜಿ ಮತ್ತು ಬಿಜೆಪಿ ಅಭ್ಯರ್ಥಿ ಆದಿತ್ಯ ಸಾಹು ಅವರು ಆಯ್ಕೆ ಆದರು.
ಛತ್ತೀಸಗಡದ ಆಡಳಿತಾರೂಢ ಕಾಂಗ್ರೆಸ್ನ ಅಭ್ಯರ್ಥಿಗಳಾದ ರಾಜೀವ್ ಶುಕ್ಲಾ ಮತ್ತು ರಂಜೀತ್ ರಾಜನ್ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ವಿರೋಧ ಪಕ್ಷವಾದ ಬಿಜೆಪಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದರಲಿಲ್ಲ. ಮಧ್ಯಪ್ರದೇಶದಿಂದ ಕಾಂಗ್ರೆಸ್ ಅಭ್ಯರ್ಥಿ, ಹಿರಿಯ ವಕೀಲ ವಿವೇಕ್ ತಂಖಾ ಮತ್ತು ಬಿಜೆಪಿಯ ಅಭ್ಯರ್ಥಿಗಳಾದ ಸುಮಿತ್ರಾ ವಾಲ್ಮೀಕಿ, ಕವಿತಾ ಪಾಟೀದಾರ್ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ.