ಮಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮನ ಮೂರ್ತಿಯ ಆಯ್ಕೆ ಇನ್ನೂ ಅಂತಿಮವಾಗಿಲ್ಲ. ಅಯೋಧ್ಯೆಯಲ್ಲಿ ಟ್ರಸ್ಟ್ ಜತೆ ಕಾರ್ಯನಿರ್ವಹಿಸುವವರು ಇದನ್ನು ಸ್ಪಷ್ಟಪಡಿಸಿದರೆ, ಖುದ್ದು ಟ್ರಸ್ಟ್ ಸದಸ್ಯರೂ ಆಗಿರುವ ಉಡುಪಿ ಶ್ರೀ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕೂಡ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ಪೇಜಾವರ ಶ್ರೀಗಳು, “ಅಯೋಧ್ಯೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಲಿರುವ ರಾಮನ ಮೂರ್ತಿ ಯಾವುದು ಎಂದು ಇನ್ನೂ ಅಂತಿಮಗೊಂಡಿಲ್ಲ. ಟ್ರಸ್ಟ್ ನ ಸದಸ್ಯರು ಸಭೆ ಸೇರಿ ಮೂರು ಮೂರ್ತಿಗಳಲ್ಲಿ ಒಂದನ್ನು ಆಯ್ಕೆ ಮಾಡಿದ್ದೇವೆ. ಇದರ ವಿವರ ಶೀಘ್ರದಲ್ಲಿ ಬಹಿರಂಗಗೊಳ್ಳಲಿದೆ” ಎಂದಿದ್ದಾರೆ. ಗರ್ಭಗೃಹದಲ್ಲಿ ಬಾಲರಾಮನ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ. ಮೇಲಂತಸ್ತಿನಲ್ಲಿ ರಾಮನ ಪಟ್ಟಾಭಿಷೇಕ ಮತ್ತು ಪರಿವಾರ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಜನವರಿ 22ರಂದು ಪ್ರಾಣಪ್ರತಿಷ್ಠೆಯ ಬಳಿಕ ಜನವರಿ 23ರಿಂದ ಮಾರ್ಚಿ 10ರವರೆಗೆ 48 ದಿನಗಳ ಕಾಲ ಮಂಡಲೋತ್ಸವ ನಡೆಯಲಿದೆ ಎಂದವರು ತಿಳಿಸಿದ್ದಾರೆ.
ಅಯೋಧ್ಯೆಯ ಶ್ರೀರಾಮ ಮೂರ್ತಿ ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಯಾಗಿದೆ ಎಂದು ಬಿಜೆಪಿಯ ಉನ್ನತ ನಾಯಕರು ಸೇರಿ ಪ್ರಮುಖರು ಹೇಳಿಕೆಗಳನ್ನು ನೀಡಿರುವುದು ಸದ್ಯ ಗೊಂದಲ ಸೃಷ್ಟಿಗೆ ಕಾರಣವಾಗಿದೆ. ಮೈಸೂರಿನ ಅರುಣ್ ಯೋಗಿರಾಜ್ ಕೆತ್ತಿದ ಮೂರ್ತಿಯೇ ಅಂತಿಮ ಆಗಿದೆ ಎಂಬ ವದಂತಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಈ ಕುರಿತು ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ಸಂಪರ್ಕಿಸಿದಾಗ ಅವರು ಅದನ್ನು ಅಲ್ಲಗಳೆದು, ಯಾವುದೂ ಅಂತಿಮ ಆಗಿಲ್ಲ ಎಂದಿರುವುದಾಗಿ ತಿಳಿದು ಬಂದಿದೆ.
ವಾಸ್ತವವಾಗಿ ಮೈಸೂರಿನ ಅರುಣ್ ಯೋಗಿರಾಜ್, ಹೊನ್ನಾವರದ ಗಣೇಶ್ ಎಲ್. ಭಟ್ ಮತ್ತು ರಾಜಸ್ತಾನದ ಸತ್ಯನಾರಾಯಣ ಪಾಂಡೆ ಅವರೇ ಅಂತಿಮವಾಗಿ ಆಯ್ಕೆಗೊಂಡ ಶಿಲ್ಪಿಗಳು. ಇವರು ಕೆತ್ತಿದ 51 ಇಂಚು ಎತ್ತರದ ಬಾಲರಾಮನ ಮೂರ್ತಿಗಳೇ ಅಂತಿಮವಾಗಿದ್ದು, ಇವುಗಳಲ್ಲಿ ಫೈನಲ್ ಆಗಿ ಯಾವ ಮೂರ್ತಿ ಅಂತಿಮಗೊಳ್ಳಲಿದೆ ಎಂಬುದರ ಕುರಿತು ವೋಟಿಂಗ್ ಆಗಿದ್ದು, ಫಲಿತಾಂಶ ಹೊರಬೀಳುವುದು ಬಾಕಿ ಇದೆ. ವೋಟಿಂಗ್ ಮಾಡಿ ಬಂದಿದ್ದೇವೆ ಫಲಿತಾಂಶ ಪ್ರಕಟಿಸುತ್ತೇವೆ, ಅದನ್ನು ಟ್ರಸ್ಟ್ ಪ್ರಕಟಿಸಲಿದೆ ಎಂದು ಸ್ವತಃ ಪೇಜಾವರ ಶ್ರೀಗಳು ಹೇಳಿದ್ದಾರೆ.