ಅಸ್ಸಾಂ: ಜ.22ರಂದು ಹಲವು ದಶಕಗಳ ಕಾಲ ಭಾರತೀಯರು ಕಾದು ಕುಳಿತಿದ್ದ ರಾಮ ಮಂದಿರ ಉದ್ಘಾಟನೆಯಾಗಿದೆ. ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೇವಿಧಿ ವಿಧಾನಗಳ ಮೂಲಕ ಬಾಲರಾಮನ ಪ್ರಾಣ ಪ್ರತಿಷ್ಠಾನ ನೆರವೇರಿಸಿದ್ದಾರೆ.
ಈ ಕಾರ್ಯಕ್ರಮಕ್ಕೆ ದೇಶ ವಿದೇಶದ ಗಣ್ಯರು, ಸಿನಿಮಾ ನಟರು, ಕ್ರೀಡಾ ದಿಗ್ಗಜರು ವಿವಿಧ ಕ್ಷೇತ್ರಗಳ ಸಾಧಕರು ಕೂಡ ಭಾಗವಹಿಸಿದ್ದರು. ಆದರೆ ಕಾಂಗ್ರೆಸ್ ನಾಯಕರು ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇದೀಗ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿರುವ ರಾಹುಲ್ ಗಾಂಧಿ ರಾಮ ಮಂದಿರದ ಬಗ್ಗೆ ಸಂಚಲನಕಾರಿ ಹೇಳಿಕೆ ನೀಡಿದ್ದರು.
ಮಂಗಳವಾರ ಅಸ್ಸಾಂನಲ್ಲಿ ಪತ್ರಿಕಾ ಗೋಷ್ಠಿ ನಡೆಸಿದರು. ಇದರಲ್ಲಿ ಭಾರತ್ ಜೋಡೋ ಯಾತ್ರೆ, ಅಸ್ಸಾಂನಲ್ಲಿ ತಮಗಾಗುತ್ತಿರುವ ತೊಡಕು, I.ಓ.ಆ.I.ಂ ಬ್ಲಾಕ್ನಲ್ಲಿ ಯಾರು ಪ್ರಧಾನಿಯಾಗಲಿದ್ದಾರೆ ಎಂಬ ವಿಚಾರಗಳ ಕುರಿತು ಮಾತನಾಡಿದರು.
ಈ ವೇಳೆ ಪತ್ರಕರ್ತರೊಬ್ಬರು, ರಾಮ ಮಂದಿರ ಉದ್ಘಾಟನೆ ಬಳಿಕ ದೇಶದಲ್ಲಿ ರಾಮನ ಅಲೆ ಎದ್ದಿದೆ. ವಿಪಕ್ಷಗಳು ರಾಮನ ಅಲೆಯನ್ನು ಎದುರಿಸಲು ಯಾವ ರೀತಿಯ ಯೋಜನೆ ರೂಪಿಸಿಕೊಂಡಿದ್ದೀರಾ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಕಾಂಗ್ರೆಸ್ ನಾಯಕ, ಎಲ್ಲೂ ರಾಮನ ಅಲೆ ಎಂಬುದಿಲ್ಲ, ಅಯೋಧ್ಯೆಯಲ್ಲಿ ನಡೆದದ್ದು ಬಿಜೆಪಿಯವರ ಕಾರ್ಯಕ್ರಮ ಎಂದು ನಾನು ಮೊದಲೇ ಹೇಳಿದ್ದೇನೆ. ಅದೊಂದು ರಾಜಕೀಯ ಘಟನೆ, ಬಿಜೆಪಿ ಮತ್ತು ಮೋದಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ಎಂದು ತಿಳಿಸಿದರು.