ನವದೆಹಲಿ: ಕಳೆದ ವಾರ ಲೋಕಸಭೆಯಲ್ಲಿ ನಡೆದ ‘ಹೊಗೆ ಬಾಂಬ್’ ದಾಳಿಯ ಭದ್ರತಾಲೋಪಕ್ಕೆ ಸಂಬಂಧಿಸಿದಂತೆ ಸಂಸತ್ತಿನ ಉಭಯ ಸದನಗಳಲ್ಲಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದ ಹಾಗೂ ಗೃಹ ಸಚಿವ ಅಮಿತ್ ಶಾ ಈ ಬಗ್ಗೆ ಹೇಳಿಕೆ ನೀಡಬೇಕೆಂದು ಕೋಲಾಹಲ ಎಬ್ಬಿಸಿದ ವಿಪಕ್ಷಗಳ 78 ಸಂಸದರನ್ನು ಉಭಯ ಸದನಗಳ ಮುಖ್ಯಸ್ಥರು ಸೋಮವಾರ ಅಮಾನತು ಮಾಡಿದ್ದಾರೆ.
ಕಳೆದ ವಾರ ಇದೇ ಉದ್ದೇಶಕ್ಕೆ ಅಮಾನತಾದ 14 ಸಂಸದರನ್ನೂ ಸೇರಿಸಿದರೆ ಒಟ್ಟು 92 ಸಂಸದರು ಪ್ರಸಕ್ತ ಅಧಿವೇಶನದಿಂದ ಅಮಾನತುಗೊಂಡಂತಾಗಿದೆ. ಸೋಮವಾರ ಲೋಕಸಭೆಯಲ್ಲಿ 33 ಮಂದಿ ಹಾಗೂ ರಾಜ್ಯಸಭೆಯಲ್ಲಿ 45 ಸಂಸದರು ಅಮಾನತಾಗಿದ್ದಾರೆ. ಒಂದೇ ಅಧಿವೇಶನದಲ್ಲಿ ಇಷ್ಟು ಸಂಸದರನ್ನು ಅಮಾನತು ಮಾಡಿರುವುದು ಸಂಸತ್ತಿನ ಇತಿಹಾಸದಲ್ಲೇ ದಾಖಲೆ ಎಂದು ಹೇಳಲಾಗಿದೆ.
ಲೋಕಸಭೆಯಿಂದ ಸೋಮವಾರ 33 ಸಂಸದರನ್ನು ಅಮಾನತು ಮಾಡಲಾಗಿದೆ. ಇವರ ಪೈಕಿ ಲೋಕಸಭೆಯಲ್ಲಿನ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಕೂಡ ಸೇರಿದ್ದಾರೆ. 33 ಸಂಸದರಲ್ಲಿ 30 ಮಂದಿಯನ್ನು ಚಳಿಗಾಲದ ಅಧಿವೇಶನದ ಇನ್ನುಳಿದ ಅವಧಿಗೆ ಅಮಾನತು ಮಾಡಿದ್ದರೆ, 3 ಸಂಸದರನ್ನು ಹಕ್ಕುಬಾಧ್ಯತಾ ಸಮಿತಿಯ ನಿರ್ಧಾರ ಬಾಕಿಯುಳಿಸಿಕೊಂಡು ಅಮಾನತು ಮಾಡಲಾಗಿದೆ. ಕಳೆದ ವಾರ ಕೂಡ ಇದೇ ಕಾರಣಕ್ಕೆ ವಿಪಕ್ಷಗಳ 13 ಸಂಸದರನ್ನು ಲೋಕಸಭೆಯಿಂದ ಅಮಾನತು ಮಾಡಲಾಗಿತ್ತು. ಹೀಗಾಗಿ ಲೋಕಸಭೆಯಿಂದ ಪ್ರಸಕ್ತ ಕಲಾಪದಲ್ಲಿ 46 ಸಂಸದರು ಅಮಾನತುಗೊಂಡಂತಾಗಿದೆ.
ರಾಜ್ಯಸಭೆಯಿಂದ ಸೋಮವಾರ 45 ಸಂಸದರನ್ನು ಭದ್ರತಾಲೋಪ ಕುರಿತ ಗದ್ದಲದ ಕಾರಣಕ್ಕೆ ಅಮಾನತು ಮಾಡಲಾಗಿದೆ. ಕಳೆದ ವಾರ ಇದೇ ಕಾರಣಕ್ಕೆ ಒಬ್ಬ ಸಂಸದರನ್ನು ಅಮಾನತು ಮಾಡಲಾಗಿತ್ತು. ಹೀಗಾಗಿ ರಾಜ್ಯಸಭೆಯಿಂದ ಪ್ರಸಕ್ತ ಕಲಾಪದಲ್ಲಿ 46 ಸಂಸದರು ಅಮಾನತುಗೊಂಡಂತಾಗಿದೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ನ ಜೈರಾಮ್ ರಮೇಶ್ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ, ಡಿಎಂಕೆಯ ಕನಿಮೋಳಿ ಮತ್ತು ಆರ್ಜೆಡಿಯ ಮನೋಜ್ ಕುಮಾರ್ ಝಾ ಅಮಾನತುಗೊಂಡವರಲ್ಲಿ ಸೇರಿದ್ದಾರೆ. ಅಮಾನತಾದವರಲ್ಲಿ 3 ಕರ್ನಾಟಕದ ರಾಜ್ಯಸಭಾ ಸದಸ್ಯರಾದ ಜಿ.ಸಿ. ಚಂದ್ರಶೇಖರ್, ಎಲ್. ಹನುಮಂತಯ್ಯ ಹಾಗೂ ನಾಸಿರ್ ಹುಸೇನ್ ಕೂಡ ಇದ್ದಾರೆ. ಇನ್ನು 45 ಸಂಸದರ ಪೈಕಿ 11 ಜನರ ಹೆಸರನ್ನು ಹಕ್ಕುಬಾಧ್ಯತಾ ಸಮಿತಿಗೆ ನೀಡಲಾಗಿದೆ.
ಲೋಕಸಭೆಯಿಂದ ಸೋಮವಾರ ಅಮಾನತುಗೊಂಡವರಲ್ಲಿ 10 ಡಿಎಂಕೆ, 9 ತೃಣಮೂಲ ಕಾಂಗ್ರೆಸ್, 8 ಕಾಂಗ್ರೆಸ್ ಹಾಗೂ ಐಯುಎಂಎಲ್, ಜೆಡಿಯು, ಆರ್ಎಸ್ಪಿ ಸಂಸದರು ಸೇರಿದ್ದಾರೆ.
ರಾಜ್ಯಸಭೆಯಲ್ಲಿ 19 ಕಾಂಗ್ರೆಸ್, 7 ಟಿಎಂಸಿ, 4 ಡಿಎಂಕೆ, 2 ಆರ್ಜೆಡಿ, 2 ಜೆಡಿಯು, 3 ಸಿಪಿಎಂ, 2 ಸಿಪಿಐ, ಸಿಪಿಐ, 1 ಎನ್ಸಿಪಿ, 2 ಎಸ್ಪಿ, 1 ಜೆಎಂಎಂ, 1 ಕೇರಳ ಕಾಂಗ್ರೆಸ್(ಎಂ), ಒಬ್ಬ ಸ್ವತಂತ್ರ ಸಂಸದ ಅಮಾನತಾಗಿದ್ದಾರೆ.