ಪಂಜಾಬ್, ಚಂಡೀಗಢ, ಶಿಮ್ಲಾ: ಮೇಘಸ್ಫೋಟದಿಂದಾಗಿ ಸಟ್ಲೇಜ್ ಮತ್ತು ಬಿಯಾಸ್ ನದಿಗಳ ಉದ್ದಕ್ಕೂ ಇರುವ ನೂರಾರು ಹಳ್ಳಿಗಳು ಜಲಾವೃತಗೊಂಡಿವೆ. ಬುಧವಾರ ಭಾಕ್ರಾ ಮತ್ತು ಪಾಂಗ್ ಅಣೆಕಟ್ಟುಗಳ ಗೇಟ್ಗಳನ್ನು ತೆರೆಯಲಾಗಿದ್ದು, ಕೆಳಭಾಗದಲ್ಲಿರುವ ನೂರಾರು ಹಳ್ಳಿಗಳು ಜಲಾವೃತಗೊಂಡಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್ಡಿಆರ್ಎಫ್) ತಂಡಗಳು ಪ್ರಸ್ತುತ ಜನರ ರಕ್ಷಣೆ ಮತ್ತು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಕೆಲಸ ಮಾಡುತ್ತಿದೆ.
ಪಂಜಾಬ್ನ ರೋಪರ್, ಆನಂದ್ಪುರ್ ಸಾಹಿಬ್ ಮತ್ತು ಹೋಶಿಯಾರ್ಪುರ್ ಜಿಲ್ಲೆ ಮತ್ತು ಹಿಮಾಚಲದ ಕಾಂಗ್ರಾ ಜಿಲ್ಲೆಯಲ್ಲಿ ಪ್ರವಾಹದ ಮಟ್ಟ ಕ್ಷಣದಿಂದ ಕ್ಷಣಕ್ಕೆ ಏರುತ್ತಿದೆ. ಪಂಜಾಬ್ನಲ್ಲಿ, ಒಂದು ತಿಂಗಳೊಳಗೆ ಎರಡನೇ ಬಾರಿಗೆ ಹಲವು ಹಳ್ಳಿಗಳು ಮುಳುಗಡೆಯಾಗಿದ್ದು, ಕೃಷಿ ಬೆಳೆಗಳಿಗೆ ತೀವ್ರ ಹಾನಿಯಾಗಿದೆ. ಭಾಕ್ರಾ ಅಣೆಕಟ್ಟಿನಿಂದ ನೀರು ಬಿಡುಗಡೆಯಾದ ಕಾರಣ ಆನಂದಪುರ ಸಾಹಿಬ್ ಕ್ಷೇತ್ರದಲ್ಲಿ ಕೆಲವು ಗ್ರಾಮಗಳು ಸಂಪೂರ್ಣ ಜಲಾವೃತವಾಗಿದೆ ಎಂದು ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ಹೇಳಿದ್ದಾರೆ.