ಅಹಮದಾಬಾದ್: ಬೆಂಗಳೂರು-ಕಲಬುರಗಿ, ಮೈಸೂರು-ಚೆನ್ನೈ ಸೇರಿದಂತೆ 10 ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇಂದು (ಮಂಗಳವಾರ) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ಇದೇ ವೇಳೆ ತಿರುವನಂತಪುರ-ಕಾಸರಗೋಡು ವಂದೇ ಭಾರತ್ ರೈಲು ಅನ್ನು ಮಂಗಳೂರಿಗೂ ವಿಸ್ತರಿಸಲು ಪ್ರಧಾನಿ ಮೋದಿ ಹಸಿರು ನಿಶಾನೆ ನೀಡಿದ್ದಾರೆ.
ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿನ ಚಾಲನೆಯೊಂದಿಗೆ ಕಲಬುರಗಿ ಜನತೆಯ ಬಹುದಿನಗಳ ಬೇಡಿಕೆ ಈಡೇರಿದೆ. ಮತ್ತೊಂದೆಡೆ ಮೈಸೂರು-ಚೆನ್ನೈ ನಡುವೆ ಪ್ರತಿ ದಿನ ಈಗಾಗಲೇ ವಂದೇ ಭಾರತ್ ರೈಲು ಸಂಚರಿಸುತ್ತಿದ್ದು, ಇದು ಈ ಮಾದರಿಯ ಎರಡನೇ ರೈಲಾಗಿದೆ. ಮೈಸೂರಿನಿಂದ ವಿದ್ಯುತ್ ಮಾರ್ಗದ ಕಾಮಗಾರಿ ನಿಮಿತ್ತ ಸದ್ಯ ಈ ರೈಲು ಬೆಂಗಳೂರು-ಚೆನ್ನೈ ನಡುವೆ ಸಂಚರಿಸಲಿದ್ದು, ಏಪ್ರಿಲ್ 5ರಿಂದ ಮೈಸೂರಿನಿಂದ ಸೇವೆ ಆರಂಭಿಸಲಿದೆ.
10 ಹೊಸ ವಂದೇ ಭಾರತ್ ರೈಲುಗಳು
- ಅಹಮದಾಬಾದ್-ಮುಂಬೈ ಸೆಂಟ್ರಲ್
- ಸಿಕಂದರಾಬಾದ್-ವಿಶಾಖಪಟ್ಟಣ
- ಮೈಸೂರು-ಡಾ.ಎಂಜಿಆರ್ ಸೆಂಟ್ರಲ್ (ಚೆನ್ನೈ)
- ಪಟ್ನಾ-ಲಖನೌ
- ನ್ಯೂ ಜಲ್ಪೈಗುರಿ-ಪಟ್ನಾ
- ಪುರಿ-ವಿಶಾಖಪಟ್ಟಣ
- ಲಖನೌ-ಡೆಹ್ರಾಡೂನ್
- ಕಲಬುರಗಿ-ಸರ್.ಎಂ.ವಿಶ್ವೇಶ್ವರಯ್ಯ ಟರ್ಮಿನಲ್, ಬೆಂಗಳೂರು
- ರಾಂಚಿ-ವಾರಾಣಸಿ
- ಖಜುರಾಹೊ-ದೆಹಲಿ (ನಿಜಾಮುದ್ದೀನ್)
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ₹85,000 ಕೋಟಿ ಮೌಲ್ಯದ ರೈಲ್ವೆ ಯೋಜನೆಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೇರವೇರಿಸಿದ್ದಾರೆ.