ನವದೆಹಲಿ: ಇಂದಿನಿಂದ(ಜುಲೈ 20) ಪ್ರಾರಂಭವಾಗುವ ಸಂಸತ್ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರವು ಒಟ್ಟು 31 ಮಸೂದೆಗಳನ್ನು ಚರ್ಚಿಸುವ ಸಾಧ್ಯತೆಯಿದೆ. ಇವುಗಳನ್ನು ಈಗಾಗಲೇ ಕೆಳಮನೆಯಲ್ಲಿ ಮಂಡಿಸಲಾಗಿದೆ ಮತ್ತು ಜಂಟಿ ಸಮಿತಿಗಳಿಗೆ ಉಲ್ಲೇಖಿಸಲಾಗಿದೆ.
ಡೇಟಾ ರಕ್ಷಣೆ ಮಸೂದೆಯು ಕೇಂದ್ರದ ಕಾರ್ಯಸೂಚಿಯ ಒಂದು ಭಾಗವಾಗಿದೆ. ಇದರ ನಡುವೆ ಸದ್ಯ ದೇಶದ ಎಲ್ಲರ ಕಣ್ಣುಗಳು ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ (ತಿದ್ದುಪಡಿ) ಸುಗ್ರೀವಾಜ್ಞೆ, 2023 ಮಸೂದೆಯ ಮೇಲೆ ಇದೆ. ಇದನ್ನು ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರವು ತೀವ್ರವಾಗಿ ಟೀಕಿಸಿದೆ. ವಿಪಕ್ಷಗಳ ಸಭೆಯಲ್ಲಿಯೂ ಇದನ್ನು ಖಂಡಿಸಲಾಗಿದೆ. ಇಷ್ಟು ದಿನ ಈ ಬಗ್ಗೆ ಸುಮ್ಮನಿದ್ದ ಕಾಂಗ್ರೆಸ್ ಕೂಡ ಬಹಿರಂಗವಾಗಿ ಈ ಮಸೂದೆಯನ್ನು ಟೀಕಿಸಿ, ಎಎಪಿಗೆ ಬೆಂಬಲ ಸೂಚಿಸಿದೆ.
ಈ ಬಾರಿಯ ಅಧಿವೇಶನದಲ್ಲಿ ಒಟ್ಟು 31 ಬಿಲ್ ಮಂಡನೆ ಸಾಧ್ಯತೆ ಇದೆ. ಈ 31 ಬಿಲ್ ಲೋಕಸಭೆಯಲ್ಲಿ ಸರಾಗವಾಗಿ ಪಾಸ್ ಆಗಲಿದ್ದು ರಾಜ್ಯಸಭೆಯಲ್ಲಿ ಬಿಲ್ ಪಾಸ್ ಮಾಡಲು ವಿಪಕ್ಷಗಳು ಅಡ್ಡಿಗೆ ಯತ್ನಿಸಬಹುದು. ಸದ್ಯ ರಾಜ್ಯಸಭೆಯ ಒಟ್ಟು 238 ಸಂಸದರಿದ್ದು, ಬಿಜೆಪಿ ಮತ್ತು ಅದರ ಮಿತ್ರ ಪಕ್ಷ ಗಳು ಒಟ್ಟಾಗಿ 111 ಸದಸ್ಯರನ್ನು ಹೊಂದಿವೆ (ನಾಮನಿರ್ದೇಶಿತ ಸಂಸದರು ಸೇರಿದಂತೆ) ಬಿಜೆಡಿ, ವೈಎಸ್ಆರ್ಸಿಪಿ, ಬಿಎಸ್ಪಿ, ಟಿಡಿಪಿ ಮತ್ತು ಜೆಡಿಎಸ್ ಹೊರತುಪಡಿಸಿ ಪ್ರತಿಪಕ್ಷಗಳು 106 ಸದಸ್ಯರನ್ನ ಹೊಂದಿದೆ.