ದೆಹಲಿ: ಇಂದು 12ಕ್ಕೆ ಲೋಕಸಭೆ ಕಲಾಪ ಪುನಾರಂಭವಾಗಿದ್ದು, ಸ್ಪೀಕರ್ ಓಂ ಬಿರ್ಲಾ ಅವರು ಕಲಾಪ ಆರಂಭಿಸಿದ್ದಾರೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಮಾತನಾಡುತ್ತಿದ್ದಾರೆ.
ಸೋಮವಾರ ಸಂಸತ್ ಸದಸ್ಯತ್ವವನ್ನು ಮರುಸ್ಥಾಪಿಸಿದ ನಂತರ ಇದು ರಾಹುಲ್ ಗಾಂಧಿಯವರ ಮೊದಲ ಭಾಷಣವಾಗಿದೆ. ಅವಿಶ್ವಾಸ ನಿರ್ಣಯದ ಮೇಲೆ ಮಾತನಾಡಲು ಎದ್ದು ನಿಂತ ರಾಹುಲ್ ಗಾಂಧಿ ಹಿಂದಿನ ಸಂಸತ್ತಿನ ಅಧಿವೇಶನದಲ್ಲಿ ಭಾಷಣವನ್ನು ಉಲ್ಲೇಖಿಸಿದ್ದು,, ಸ್ಪೀಕರ್ ಈಗ ರಿಲ್ಯಾಕ್ಸ್ ಆಗಬಹುದು ಎಂದಿದ್ದಾರೆ.
ಅವಿಶ್ವಾಸ ನಿರ್ಣಯದ ಕುರಿತು ಮಾತನಾಡುವಾಗ, ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ತಮ್ಮ ಭಾರತ್ ಜೋಡೋ ಯಾತ್ರೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಪ್ರಯಾಣ ಇನ್ನೂ ಮುಗಿದಿಲ್ಲ. ಅದು ಇನ್ನೂ ಚಾಲನೆಯಲ್ಲಿದೆ ಎಂದು ಅವರು ಹೇಳಿದರು.
ಬಿಜೆಪಿಯನ್ನು ಟೀಕಿಸುವ ಮೂಲಕ ಭಾಷಣ ಆರಂಭಿಸಿದ ರಾಹುಲ್ “ನೀವು (ಬಿಜೆಪಿ) ಇಂದು ಭಯಪಡುವ ಅಗತ್ಯವಿಲ್ಲ, ನನ್ನ ಭಾಷಣವು ಅದಾನಿ ವಿಷಯದ ಬಗ್ಗೆ ಅಲ್ಲ ಎಂದು ಹೇಳಿದ್ದಾರೆ . ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅವರು ಯಾತ್ರೆ ಇನ್ನೂ ಮುಗಿದಿಲ್ಲ. ನೀವು ಯಾತ್ರೆಯನ್ನು (ಭಾರತ್ ಜೋಡೋ ಯಾತ್ರೆ) ಏಕೆ ಪ್ರಾರಂಭಿಸಿದ್ದೀರಿ ಎಂದು ಜನರು ನನ್ನನ್ನು ಕೇಳುತ್ತಿದ್ದರು. ನಾನು ಯಾಕೆ ಯಾತ್ರೆ ಆರಂಭಿಸಿದೆ ಎಂಬುದು ನನಗೇ ಗೊತ್ತಿಲ್ಲ.
ಆದರೆ ಆ ಪ್ರಯಾಣದಲ್ಲಿ ಜನರ ನೋವು, ಸಂಕಟ, ಸಮಸ್ಯೆಗಳು ನನ್ನದೇ ಸಮಸ್ಯೆಗಳಾದವು. ಯಾತ್ರೆಯ ವೇಳೆ ನನ್ನಲ್ಲಿದ್ದ ಅಹಂಕಾರದ ಭಾವನೆ ಮಾಯವಾಯಿತು.
‘ಭಾರತ ಜನರ ಧ್ವನಿ. ಈ ಧ್ವನಿಗಳನ್ನು ಆಲಿಸಲು, ನಾವು ನಮ್ಮ ಆಸೆಗಳನ್ನು ತ್ಯಾಗ ಮಾಡಬೇಕು ಮತ್ತು ನಮ್ಮ ಅಹಂ ಮತ್ತು ದ್ವೇಷವನ್ನು ಬಿಟ್ಟುಬಿಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು.