ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧದ ಕ್ರಿಮಿನಲ್ ಡಿಫಮೇಶನ್ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದ ಕಾರಣ ಸಂಸತ್ ಸದಸ್ಯತ್ವ ಮರಳಿ ಪಡೆದಿದ್ದಾರೆ. ಇದರ ಬೆನ್ನಲ್ಲೇ ರಾಹುಲ್ ಅವರು ಸಂಸತ್ತಿಗೆ ಪ್ರವೇಶಿಸಿ, ಲೋಕಸಭೆ ಕಲಾಪದಲ್ಲೂ ಭಾಗಿಯಾಗಿದ್ದಾರೆ.
ಸಂಸತ್ ಸ್ಥಾನದಿಂದ ಅನರ್ಹಗೊಂಡ ಬಳಿಕ ರಾಹುಲ್ ಗಾಂಧಿ ತುಘಲಕ್ ಲೇನ್ನಲ್ಲಿದ್ದ ತಮ್ಮ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಿದ್ದರು. ಇದೀಗ ಸಂಸತ್ ಸದಸ್ಯತ್ವ ಮರಳಿ ಸಿಕ್ಕ ಬೆನ್ನಲ್ಲೇ ತಾವಿದ್ದ ಸರ್ಕಾರಿ ಬಂಗಲೆ ಮರಳಿ ಸಿಗುತ್ತಾ ಅನ್ನೋ ಚರ್ಚೆ ಶುರುವಾಗಿದೆ. ನಿಯಮದ ಪ್ರಕಾರ, ರಾಹುಲ್ ಗಾಂಧಿ ಸರ್ಕಾರಿ ಬಂಗಲೆಗೆ ಅರ್ಜಿ ಸಲ್ಲಿಸಿದರೆ ಸಂಸದರಿಗೆ ಸರ್ಕಾರ ಮನೆ ನೀಡಲಿದೆ.
ವಸತಿ ಸಮಿತಿಯ ಮೂಲಗಳ ಪ್ರಕಾರ, ಮನೆ ಖಾಲಿ ಇದ್ದು, ವಯನಾಡ್ ಸಂಸದರಾದ ರಾಹುಲ್ ಬಂಗಲೆಯನ್ನ ಮರಳಿ ಪಡೆಯಲಿದ್ದಾರೆ ಎನ್ನಲಾಗ್ತಿದೆ.
ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸಲು ಕೇಳಿದಾಗ ಕಾಂಗ್ರೆಸ್ ನಾಯಕ “ಮೇರಾ ಘರ್ ಪೂರಾ ಹಿಂದೂಸ್ತಾನ್ ಹೈ” ಎಂದು ಹೇಳಿದರು. ಅಂದ್ಹಾಗೆ, 2004ರಲ್ಲಿ ಉತ್ತರ ಪ್ರದೇಶದ ಅಮೇಥಿಯಿಂದ ಮೊದಲ ಬಾರಿಗೆ ಸಂಸದರಾದಾಗ ರಾಹುಲ್ ಗಾಂಧಿಗೆ 12, ತುಘಲಕ್ ಲೇನ್ ಬಂಗಲೆಯನ್ನ ನೀಡಲಾಗಿತ್ತು. ಆದರೆ ರಾಹುಲ್ ಗಾಂಧಿ ತೆರವಾದ ಬಳಿಕ ಈ ಬಂಗಲೆ ಖಾಲಿಯಾಗಿ ಉಳಿದಿದೆ.