News Karnataka Kannada
Tuesday, April 30 2024
ದೇಶ

ತಮಿಳುನಾಡಿನಿಂದ ಮೋದಿ ಸ್ಪರ್ಧೆ: ಮ್ಯಾಜಿಕ್‌ ಮಾಡುತ್ತಾರಾ ಅಣ್ಣಾಮಲೈ ?

Annamalai and modi
Photo Credit : Twitter

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣದ ರಾಜ್ಯವೊಂದರಿಂದ ಸ್ಪರ್ಧಿಸಲಿದ್ದಾರೆ ಎಂಬ ಸುದ್ದಿಯೊಂದು ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಬಹುತೇಕ ತಮಿಳುನಾಡಿನಿಂದ ಮೋದಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ತಮಿಳುನಾಡಿನ ಕನ್ಯಾಕುಮಾರಿ ಕ್ಷೇತ್ರದ ಮೇಲೆ ಮೋದಿ ಆಸಕ್ತರಾಗಿದ್ದಾರೆ ಎಂಬ ಗುಸುಗುಸು ಕೆಲ ಸಮಯದ ಹಿಂದೆಯೂ ಕೇಳಿಬಂದಿತ್ತು. ಇದೀಗ ತಮಿಳುನಾಡಿನ ರಾಮನಾಥಪುರಂ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂಬ ಸುದ್ದಿ ಹರಡಿದೆ.
ಇದು ಬಹಳ ಅಚ್ಚರಿಗೆ ಕಾರಣವಾಗಿದೆ.

ಏಕೆಂದರೆ ರಾಮನಾಥಪುರಂ ಮುಸ್ಲಿಮರು ಅಧಿಕವಿರುವ ಕ್ಷೇತ್ರ ಮತ್ತು ಇಲ್ಲಿನ ಹಾಲಿ ಸಂಸದ ಮುಸ್ಲಿಂ ಲೀಗ್‌ನವರು. ನಾಂಪಲ್ಲಿಯ ಪಕ್ಷದ ಕಚೇರಿಯಲ್ಲಿ ನಡೆದ 11 ರಾಜ್ಯಗಳ ಬಿಜೆಪಿ ಅಧ್ಯಕ್ಷರು ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಪ್ರಾದೇಶಿಕ ಸಮಾಲೋಚನಾ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ದಕ್ಷಿಣದಲ್ಲಿ ಪಕ್ಷವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ದಕ್ಷಿಣ ಭಾರತದ ರಾಜ್ಯವೊಂದರಿಂದ ಮೋದಿ ಅವರನ್ನು ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ಪ್ರತಿನಿಧಿಗಳಿಗೆ ತಿಳಿಸಿದರು ಎನ್ನಲಾಗಿದೆ. ಪ್ರತಿನಿಧಿಗಳ ಅಭಿಪ್ರಾಯ ಕೇಳಿದಾಗ ಬಹುತೇಕರು ನರೇಂದ್ರ ಮೋದಿ ಅವರನ್ನು ರಾಮನಾಥಪುರದಿಂದ ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಪ್ರಸ್ತುತ ಇಂಡಿಯನ್ ಮುಸ್ಲಿಂ ಲೀಗ್‌ನ ಕೆ. ನವಾಸ್ಕಾನಿ ಕ್ಷೇತ್ರದ ಸಂಸದರಾಗಿದ್ದಾರೆ. ಮುಸ್ಲಿಂ ಮತಗಳು ಅಧಿಕವಿರುವ ರಾಮನಾಥಪುರದಲ್ಲಿ ನವಾಸ್ಕನಿಯನ್ನು ಸೋಲಿಸಲು ಸಾಧ್ಯವಾದರೆ ಅದು ನೀಡುವ ಸಂದೇಶ ಬಹಳ ಪರಿಣಾಮಕಾರಿಯಾಗಿರುತ್ತದೆ ಎಂಬ ಕಾರಣಕ್ಕೆ ಬಿಜೆಪಿ ಹೈಕಮಾಂಡ್‌ ಈ ಸಾಧ್ಯತೆಯನ್ನು ಪರಿಶಿಲಿಸುತ್ತಿದೆ.

ದಕ್ಷಿಣ ಭಾರತದ ರಾಜ್ಯಗಳಿಂದ ಬಿಜೆಪಿ ಸುಮಾರು 50 ಸ್ಥಾನಗಳನ್ನಾದರೂ ಗೆಲ್ಲಬೇಕು ಎಂಬುದು ಬಿಜೆಪಿಯ ಗುರಿ. ಆದರೆ ಕರ್ನಾಟಕ, ತೆಲಂಗಾಣ ಹೊರತುಪಡಿಸಿದರೆ ಬೇರೆ ರಾಜ್ಯಗಳಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂಥ ನೆಲೆ ಇಲ್ಲ. ಈ ಪೈಕಿ ಕರ್ನಾಟಕದಲ್ಲಿ ಈ ಸಲ ಹಿಂದಿನಂತೆ 25 ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇಲ್ಲ ಎಂಬ ಅಂಶ ಬಿಜೆಪಿಯ ನಿದ್ದೆಗೆಡಿಸಿದೆ. ವಿಧಾನಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತ ಬಳಿಕ ಬಿಜೆಪಿ ದೊಡ್ಡ ಮಟ್ಟದಲ್ಲಿ ನಾಯಕತ್ವ ಕೊರತೆಯನ್ನು ಅನುಭವಿಸುತ್ತದೆ. ಮೋದಿ ಮುಖ ತೋರಿಸಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ವಿಧಾನಸಭೆ ಚುನಾವಣೆ ತೋರಿಸಿಕೊಟ್ಟಿದೆ. ಹೀಗಾಗಿ ಬಿಜೆಪಿ ಇತರ ರಾಜ್ಯಗಳತ್ತ ಗಮನ ಹರಿಸಿದ್ದು, ಇದಕ್ಕೆ ಹಿಂದುಗಳು ಅಧಿಕ ಸಂಖ್ಯೆಯಲ್ಲಿರುವ ತಮಿಳುನಾಡು ಸೂಕ್ತ ಎಂದು ಕಂಡುಕೊಂಡಿದೆ.

ಈಗಾಗಲೇ ಅಣ್ಣಾಮಲೈ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ನೇಮಿಸಿ ಬಿಜೆಪಿ ತಮಿಳುನಾಡಿನಲ್ಲಿ ಬಲವರ್ಧನೆಯ ಕೆಲಸ ಪ್ರಾರಂಭಿಸಿದೆ. ಕರ್ನಾಟಕದಲ್ಲಿ ಐಪಿಎಸ್‌ ಅಧಿಕಾರಿಯಾಗಿದ್ದ ಅಣ್ಣಾಮಲೈ ಅವರು ಬಹಳ ಮುತುವರ್ಜಿಯಿಂದ ಪಕ್ಷವನ್ನು ಸಂಘಟಿಸುತ್ತಿದ್ದು, ಇದು ಬಿಜೆಪಿಯ ಮುಂದಾಲೋಚನೆಯ ಕ್ರಮ ಎಂದು ಹೇಳಲಾಗುತ್ತಿದೆ. ಸದ್ಯ ದ್ರಾವಿಡ ಪಕ್ಷಗಳ ಕೈಯಲ್ಲಿರುವ ತಮಿಳುನಾಡನ್ನು ವಶಪಡಿಸಿಕೊಳ್ಳುವುದು ಹೇಳಿದಷ್ಟು ಸುಲಭ ಅಲ್ಲ. ಅದಕ್ಕೆ ಬಹಳ ಸುದೀರ್ಘವೂ ಸಮಗ್ರವೂ ಆದ ಯೋಜನೆ ಬೇಕು. ಈ ಯೋಜನೆಯಂಗವಾಗಿ ಮೋದಿಯನ್ನು ತಮಿಳುನಾಡಿನಿಂದ ಕಣಕ್ಕಿಳಿಸಲು ಹೈಕಮಾಂಡ್‌ ಬಯಸಿದೆ.
ಆಡಳಿತ ವಿರೋಧಿ ಅಲೆಯಿಂದಾಗಿ ಉತ್ತರದ ಕೆಲವು ರಾಜ್ಯಗಳಲ್ಲಿ ಪಕ್ಷ ಸೋಲುವ ಸಂಭವವಿರುವುದರಿಂದ ಅದನ್ನು ಸಮತೋಲನಗೊಳಿಸುವ ತಂತ್ರವಾಗಿ ದಕ್ಷಿಣದಲ್ಲಿ ಹೆಚ್ಚು ಸಿಟುಗಳನ್ನು ಗೆಲ್ಲುವುದು ಬಿಜೆಪಿಗೆ ಅನಿವಾರ್ಯವಾಗಲಿದೆ. ಹಾಗೊಂದು ವೇಳೆ ಮೋದಿ ತಮಿಳುನಾಡಿನಿಂದ ಸ್ಪರ್ಧಿಸುವದೇ ಆಗಿದ್ದರೆ ರಾಜ್ಯಾಧ್ಯಕ್ಷ ಅಣ್ಣಾಮಲೈ ಜವಾಬ್ದಾರಿ ಇನ್ನಷ್ಟು ಹೆಚ್ಚುತ್ತದೆ. ಪ್ರಧಾನಿಯನ್ನು ಗೆಲ್ಲಿಸಕೊಂಡು ಬರಲು ಅವರು ಶಕ್ತಮೀರಿ ಪ್ರಯತ್ನಸಬೇಕಾಗುತ್ತದೆ. ಸೂಪರ್‌ಕಾಪ್‌ ಆಗಿ ಉತ್ತಮ ಹೆಸರು ಸಂಪಾದಿಸಿದ್ದ ಅಣ್ಣಾಮಲೈ ರಾಜಕೀಯದಲ್ಲೂ ಆ ಮ್ಯಾಜಿಕ್‌ ಮಾಡಬಹುದೇ ಎಂದು ಕಾದು ನೋಡಬೇಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು