ನವದೆಹಲಿ: ಮುಂದಿನ ವರ್ಷದ ಲೋಕಸಭೆ ಚುನಾವಣೆ ಹಾಗೂ ವರ್ಷಾಂತ್ಯದಲ್ಲಿ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ಗಢ ರಾಜ್ಯಗಳ ವಿಧಾನಸಭೆ ಚುನಾವಣೆಗಳಿಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿರುವ ಮಧ್ಯೆ, ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸುಳಿವು ನೀಡಿದ್ದಾರೆ.
‘ಮೇರಾ ಬೂತ್ ಸಬ್ ಸೇ ಮಜ್ಬೂತ್’ ಅಭಿಯಾನ ಅಂಗವಾಗಿ ಮಧ್ಯಪ್ರದೇಶದ ಭೋಪಾಲ್ದಲ್ಲಿ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ಭಾಷಣ ಮಾಡಿದ ಮೋದಿ, ಮುಸ್ಲಿಂ ತುಷ್ಟೀಕರಣ ರಾಜಕೀಯ, ವಿಪಕ್ಷಗಳ ಮಹಾಮೈತ್ರಿ ಮತ್ತು ವಂಶಾವಳಿ ರಾಜಕೀಯದ ವಿರುದ್ಧ ಹರಿಹಾಯ್ದರು. ‘ಒಂದು ಮನೆಯಲ್ಲಿ ಒಬ್ಬ ಸದಸ್ಯನಿಗೆ ಒಂದು ಕಾನೂನು, ಇನ್ನೊಬ್ಬ ಸದಸ್ಯನಿಗೆ ಇನ್ನೊಂದು ಕಾನೂನು ಇರಲು ಸಾಧ್ಯವೇ? ಇದರಿಂದ ಮನೆಯು ಕಾರ್ಯನಿರ್ವಹಿಸಲಾಗುತ್ತದೆಯೇ? ಇಂತಹ ದ್ವಂದ್ವ ವ್ಯವಸ್ಥೆಯಿಂದ ದೇಶ ಹೇಗೆ ಕಾರ್ಯ ನಿರ್ವಹಿಸಲು ಸಾಧ್ಯ? ಎಂದು ಪ್ರಶ್ನಿಸಿದರು.
ಸಂವಿಧಾನದಲ್ಲಿಯೂ ಎಲ್ಲರಿಗೂ ಸಮಾನ ಹಕ್ಕು ಎಂಬ ಉಲ್ಲೇಖವಿದೆ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಮದುವೆ, ವಿಚ್ಛೇದನ, ವಾರಸುದಾರಿಕೆ, ನಿರ್ವಹಣೆ ಮತ್ತು ಎಲ್ಲಾ ನಾಗರಿಕರಿಗೆ ಆಸ್ತಿಯ ಉತ್ತರಾಧಿಕಾರಕ್ಕೆ ಸಂಬಂಧಿಸಿದ ಏಕರೂಪ ನಾಗರಿಕ ಸಂಹಿತೆ ವಿಷಯವನ್ನು ಪ್ರತಿಪಕ್ಷಗಳು ಮುಸ್ಲಿಂ ಸಮುದಾಯವನ್ನು ತಪ್ಪುದಾರಿಗೆಳೆಯಲು ಮತ್ತು ಪ್ರಚೋದಿಸಲು ಬಳಸುತ್ತಿವೆ. ನಿಜವಾಗಿಯೂ ಅವರಲ್ಲಿ ಮುಸ್ಲಿಮರ ಹಿತಾಸಕ್ತಿ ಕಾಪಾಡಬೇಕು ಎಂಬ ಭಾವನೆಯಿದ್ದರೆ ಮುಸ್ಲಿಂ ಕುಟುಂಬಗಳು ಶಿಕ್ಷಣ-ಉದ್ಯೋಗದಲ್ಲಿ ಹಿಂದುಳಿದಿರುತ್ತಿರಲಿಲ್ಲ’ ಎಂದು ಪ್ರಧಾನಿ ಅಭಿಪ್ರಾಯಪಟ್ಟರು. ಈ ಮೂಲಕ ಒಂದು ದೇಶ ಒಂದು ಕಾನೂನು ಎಂಬ ಏಕರೂಪ ನಾಗರೀಕ ಸಂಹಿತೆ ಜಾರಿ ಮಾಡುವುದರ ಬಗ್ಗೆ ಸುಳಿವು ನೀಡಿದ್ದಾರೆ.