ಗುವಾಹಟಿ: ಕಳೆದ ವರ್ಷದ ಅಕ್ಟೋಬರ್ನಲ್ಲಿ ಮೋರೆಹ್ನಲ್ಲಿ ನಡೆದಿದ್ದ ಮಾಜಿ ಪೊಲೀಸ್ ಅಧಿಕಾರಿಯೊಬ್ಬರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಕಿ ಸಮುದಾಯದ ಇಬ್ಬರು ಆರೋಪಿಗಳನ್ನು ಬಂಧಿಸಿದ ಬೆನ್ನಲ್ಲೇ, ಮಣಿಪುರದ ತೆಂಗ್ನೌಪಾಲ್ ಜಿಲ್ಲೆಯಲ್ಲಿ, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಹೀಗಾಗಿ ಜಿಲ್ಲೆಯಲ್ಲಿ ಮತ್ತೆ ಕರ್ಫ್ಯೂವನ್ನು ಜಾರಿಗೊಳಿಸಲಾಗಿದೆ. ಈ ಇಬ್ಬರ ಬಂಧನದ ಬಳಿಕ ಕುಕಿ ಸಮುದಾಯದ ಮಹಿಳೆಯರ ಗುಂಪು ಸೋಮವಾರ ಮೊರೆಹ್ನ ಪೊಲೀಸ್ ಠಾಣೆ ಎದುರು ಜಮಾಯಿಸಿ ಪ್ರತಿಭಟನೆ ನಡೆಸಿತು. ಬಂಧನದಲ್ಲಿರುವ ಫಿಲಿಪ್ ಖೈಖೋಲಾಯ್ ಖೋಂಗ್ಸಾಯ್ ಮತ್ತು ಹೆಮ್ಖೋಲಾಯ್ ಮೇಟ್ ಅವರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿತು.
ಕಳೆದ ಅಕ್ಟೋಬರ್ 31ರಂದು ಮೊರೆಹ್ನಲ್ಲಿ ಚಿಂಗ್ತಮ್ ಆನಂದ್ ಕುಮಾರ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಪ್ರಕರಣದ ಮುಖ್ಯ ಶಂಕಿತರಲ್ಲಿ ಇವರಿಬ್ಬರೂ ಸೇರಿದ್ದಾರೆ ಎಂದು ಮಣಿಪುರ ಪೊಲೀಸರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡಿದ್ದಾರೆ.
ಮೊರೆಹ್ನಲ್ಲಿ ಪೊಲೀಸ್ ಗಸ್ತು ತಂಡದ ಮೇಲೆ ಈ ಇಬ್ಬರು ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದಾಗ, ಅವರನ್ನು ಬಂಧಿಸಲಾಯಿತು. ಇನ್ನು ಈ ಆರೋಪಿಗಳ ಬಂಧನದ ತರುವಾಯ ತೆಂಗ್ನೌಪಾಲ್ ಜಿಲ್ಲೆಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾದ ಕಾರಣ, ಜಿಲ್ಲಾಡಳಿತ ಪುನಃ ಕರ್ಫ್ಯೂ ಹೇರಿ ಆದೇಶಿಸಿದೆ.