ಬೆಂಗಳೂರು: ಮನುಕುಲವೇ ತಲೆತಗ್ಗಿಸುವ ಹೇಯ ಕೃತ್ಯ ಮಣಿಪುರದಲ್ಲಿ ನಡೆದಿದೆ. ಇಬ್ಬರು ಯುವತಿಯರ ಬಟ್ಟೆ ಬಿಚ್ಚಿ ಮೆರವಣಿಗೆ ಮಾಡಿ ಅವರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ತಡವಾಗಿ ಬೆಳಕಿಗೆ ಬಂದ ಈ ಘಟನೆಯನ್ನು ಇಡೀ ರಾಷ್ಟ್ರವೇ ಖಂಡಿಸಿದೆ. ಪ್ರಧಾನಿ ಮೋದಿ ಸೇರಿದಂತೆ ರಾಷ್ಟ್ರ, ರಾಜ್ಯ ರಾಜಕಾರಣಿಗಳು, ಸಿನಿಮಾ ನಟ-ನಟಿಯರು ಸಹ ಈ ಅಮಾನುಷ ಕೃತ್ಯವನ್ನು ಕಟು ಶಬ್ದಗಳಲ್ಲಿ ನಿಂದಿಸುತ್ತಿದ್ದಾರೆ. ಬಹುಭಾಷಾ ನಟ, ಕನ್ನಡಿಗ ಕಿಶೋರ್ ಸಹ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ವಿಭಜನಾ ರಾಜಕೀಯ ಮಾಡುವ ರಾಜಕಾರಣಿಗಳು ಹಾಗೂ ಪ್ರಧಾನಿ ಮೋದಿ ಮೇಲೆ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
‘ಕೇವಲ ಮತ ಮತ್ತು ಅಧಿಕಾರಕ್ಕಾಗಿ ಜನರನ್ನು ವಿಭಜಿಸುವ ನಿಮ್ಮ ರಾಜಕೀಯ, ಇಂದು ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ನೀವು ಈಗಲಾದರೂ ನಿಮ್ಮ ಬಾಯಿ ತೆರೆದು ಈ ಮಹಿಳೆಯರಲ್ಲಿ ಕ್ಷಮೆಯಾಚಿಸದಿದ್ದರೆ ನಿಮ್ಮ 56 ಇಂಚಿನ ಬಡಾಯಿಗೆ ಧಿಕ್ಕಾರವಿರಲಿ. ನಿಮ್ಮಿಂದ ನಾವು ಏನನ್ನಾದರೂ ನಿರೀಕ್ಷಿಸಲು ಹೇಗೆ ಸಾಧ್ಯ? ಮಹಿಳಾ ಕುಸ್ತಿಪಟುಗಳ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬೆಂಬಲಿಸಿದವರು ನೀವೇ ಅಲ್ಲವೇ? ಬಿಲ್ಕಿಸ್ ಬಾನು ಪ್ರಕರಣದ ಆರೋಪಿಗಳನ್ನು ಸದ್ದಿಲ್ಲದೆ ಬಿಡುಗಡೆ ಮಾಡಿ ಸಂಭ್ರಮಿಸಿದವರು ನೀವೇ ಅಲ್ಲವೇ? ಹಾತ್ರಸ್ ನ ದಲಿತ ಹೆಣ್ಣುಮಕ್ಕಳ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆಯನ್ನು ಮುಚ್ಚಿ ಮುಗಿಸಿದವರು ನೀವೇ ಅಲ್ಲವೇ? ನಿಮ್ಮ ಘೋಷಣೆಗಳನ್ನು ನಿಲ್ಲಿಸಿ ಮೊದಲು ಕೆಲಸ ಮಾಡಿ” ಎಂದು ಖಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಕಿಶೋರ್ ಬರೆದುಕೊಂಡಿದ್ದಾರೆ.