ಮುಂಬೈ : ಅಶ್ಲೀಲ ಚಿತ್ರ ತಯಾರಿಕೆ ಮತ್ತು ಹಂಚಿಕೆ ಆರೋಪದ ಮೇಲಿನ ಹಲವು ಪ್ರಕರಣಗಳಲ್ಲಿ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮುಂಬೈ ಉದ್ಯಮಿ ರಾಜ್ ಕುಂದ್ರಾ ಅವರನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಅಲ್ಲದೇ ನಾಲ್ಕು ವಾರಗಳ ರಕ್ಷಣೆ ನೀಡಿದೆ. ಈ ಕುರಿತು ಸುಪ್ರೀಂ ಕೋರ್ಟ್ ಮಹಾರಾಷ್ಟ್ರ ಸರ್ಕಾರಕ್ಕೂ ನೋಟಿಸ್ ಜಾರಿ ಮಾಡಿದೆ. ನವೆಂಬರ್ 25 ರಂದು ಬಾಂಬೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಿರಾಕರಿಸಿದ ನಂತರ ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಅವರ ಪತಿ ಕುಂದ್ರಾ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ರಾಜ್ ಕುಂದ್ರಾ, ವಿಡಿಯೊಗಳು ಕಾಮಪ್ರಚೋದಕವಾಗಿದ್ದರೂ ವಾಸ್ತವವಾಗಿ ಯಾವುದೇ ದೈಹಿಕ ಅಥವಾ ಲೈಂಗಿಕ ಚಟುವಟಿಕೆಯನ್ನು ತೋರಿಸುವುವಂತಿರಲಿಲ್ಲ ಎಂದು ಸಮರ್ಥಿಸಿಕೊಂಡಿದ್ದರು. ಜತೆಗೆ ಅಂತಹ ವಿಡಿಯೊಗಳ ತಯಾರಿಕೆಯಲ್ಲಿ ಅಥವಾ ಪ್ರಸಾರದಲ್ಲಿ ಭಾಗಿಯಾಗಿಲ್ಲ ಎಂದೂ ಅವರು ಸ್ಪಷ್ಟನೆ ನೀಡಿದ್ದರು. ಈ ಪ್ರಕರಣದಲ್ಲಿ ತಮ್ಮನ್ನು ತಪ್ಪಾಗಿ ಸಿಲುಕಿಸಲಾಗಿದೆ ಎಂದು ಅವರು ಹೇಳಿದ್ದರು. ಇದೀಗ ಸುಪ್ರೀಂ ಕೋರ್ಟ್ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಆದೇಶ ನೀಡಿದ್ದು, ರಾಜ್ ಕುಂದ್ರಾರನ್ನು ನಾಲ್ಕು ವಾರ ಬಂಧಿಸದಂತೆ ರಕ್ಷಣೆ ನೀಡಿದೆ.
ಇದೇ ಪ್ರಕರಣದಲ್ಲಿ ಅಶ್ಲೀಲ ಚಿತ್ರಗಳ ಪ್ರಕರಣದಲ್ಲಿ ಇತರ ಐವರು ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಮುಂಬೈ ಹೈಕೋರ್ಟ್ ತಿರಸ್ಕರಿಸಿದೆ. ಇವರಲ್ಲಿ ನಟಿಯರಾದ ಪೂನಂ ಪಾಂಡೆ ಮತ್ತು ಶೆರ್ಲಿನ್ ಚೋಪ್ರಾ ಅರ್ಜಿಗಳೂ ಸೇರಿವೆ.
ಮುಂಬೈ ಅಪರಾಧ ಪತ್ತೆ ವಿಭಾಗವು ತನಿಖೆ ನಡೆಸುತ್ತಿರುವ ಮತ್ತೊಂದು ಪ್ರಕರಣದಲ್ಲಿ ರಾಜ್ ಕುಂದ್ರಾ ಅವರನ್ನು ಜುಲೈನಲ್ಲಿ ಬಂಧಿಸಲಾಯಿತು. ನಂತರ ಈ ಪ್ರಕರಣದಲ್ಲಿ ಕುಂದ್ರಾಗೆ ಸೆಪ್ಟೆಂಬರ್ನಲ್ಲಿ ಜಾಮೀನು ಲಭಿಸಿತ್ತು. ಪ್ರಕರಣದಲ್ಲಿ ತಾನು ಭಾಗಿಯಾಗಿದ್ದೆ ಎನ್ನುವುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ಕುಂದ್ರಾ ವಾದಿಸಿದ್ದರು. ಅಲ್ಲದೇ ಪ್ರಕರಣದಲ್ಲಿ ತಮ್ಮನ್ನು ಬಲಿಪಶು ಮಾಡಲಾಗಿದೆ ಎಂದು ಅವರು ಹೇಳಿದ್ದರು. ರಾಜ್ ಕುಂದ್ರಾ ಮೇಲೆ ಹಲವು ಆರೋಪಗಳನ್ನು ಮಾಡಲಾಗಿದೆ. ಇದೀಗ ಅದರಲ್ಲಿನ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತ್ರ ಸುಪ್ರೀಂ ಕೋರ್ಟ್ ತಾತ್ಕಾಲಿಕ ರಕ್ಷಣೆ ನೀಡಿದೆ.