ಉಜ್ಜಯಿನಿ: ಬಾಬಾ ಮಹಾಕಾಲ್ ಮೆರವಣಿಗೆ ಸಾಗುತ್ತಿದ್ದ ವೇಳೆ ಮನೆ ಮೇಲೆ ನಿಂತು ಎಂಜಲು ಉಗುಳಿದ್ದ ೧೮ ವರ್ಷದ ಯುವಕ ಅದ್ನಾನ್ ಮನ್ಸೂರಿಯ ಮನೆಯನ್ನು ಕೆಡವಲಾಗಿದೆ.
೧೫೧ ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ಅದ್ನಾನ್ ನ ಮನೆಯನ್ನು ಇದೀಗ ಬುಲ್ಡೋಜರ್ ನಿಂದ ನೆಲಸಮಗೊಳಿಸಲಾಗಿದೆ. ೫ ತಿಂಗಳ ಜೈಲುವಾಸದ ಬಳಿಕ ಆತನಿಗೆ ಜಾಮೀನು ದೊರೆತಿದ್ದು, ಪ್ರತ್ಯಕ್ಷದರ್ಶಿ ಆತನನ್ನು ಗುರುತಿಸಲು ನಿರಾಕರಿಸಿದರು.
ಜುಲೈ ೧೭ರಂದು ಉಜ್ಜಯಿನಿಯಲ್ಲಿ ಬಾಬಾ ಮಾಹಾಕಾಲ್ ಮೆರವಣಿಗೆ ಸಾಗುತ್ತಿದ್ದ ವೇಳೆ ಮೇಲಿನಿಂದ ಯಾರೋ ಉಗುಳಿದ್ದಾರೆಂದು ಭಕ್ತರು ದೂರಿದ್ದರು. ಅಶ್ರಫ್ ಹುಸೇನ್ ರ ಇಬ್ಬರು ಮಕ್ಕಳು ಮತ್ತು ಇತರರು ಛಾವಣಿಯ ಮೇಲಿನಿಂದ ಭಕ್ತರ ಮೇಲೆ ಉಗುಳಿದ್ದಾರೆ ಎಂದು ಸಾವನ್ ಲೋಟ್ ಎಂಬ ವ್ಯಕ್ತಿ ಆರೋಪಿಸಿದ್ದರು. ಈ ಸಂಬಂಧ ಇಬ್ಬರು ಅಪ್ರಾಪ್ತರು ಸೇರಿ ಮೂವರ ವಿರುದ್ಧ ೫ ಸೆಕ್ಷನ್ ಗಳ ಅಡಿಯಲ್ಲಿ FIR ದಾಖಲಿಸಲಾಗಿತ್ತು.
ಇಂದೋರ್ನ ಮಧ್ಯಪ್ರದೇಶ ಹೈಕೋರ್ಟ್ನ ಏಕಸದಸ್ಯ ಪೀಠ ಕಳೆದ ಸೋಮವಾರ ಅದ್ನಾನ್ ಗೆ ಜಾಮೀನು ನೀಡಿತ್ತು. ಈ ಬೆಳವಣಿಗೆಯ ಬೆನ್ನಲ್ಲೇ ಖಾರಾ ಕುವಾನ್ ಠಾಣೆಯ ಪೊಲೀಸರು ಮಹಾಕಾಲ್ ಮೆರವಣಿಗೆಯ ಮೇಲೆ ಉಗುಳಿರುವ ಬಗ್ಗೆಯಷ್ಟೇ ನಮಗೆ ಮಾಹಿತಿ ಸಿಕ್ಕಿದೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಾರೆ.