ಮಡಿಕೇರಿ: ಕುಶಾಲನಗರ ಪಟ್ಟಣದಿಂದ ಹರಿಯುವ ಕೊಳಚೆ ನೀರು ಕಾವೇರಿ ನದಿಯನ್ನು ಸೇರಿ ನೀರು ಕಲುಷಿತಗೊಳ್ಳುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಆದರೀಗ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಈ ಸಂಬಂಧ ಪರಿಶೀಲಿಸಿ ಕ್ರಮ ಕೈಗೊಂಡ ಕಾರಣ ಕಾವೇರಿ ನೀರನ್ನು ಬಳಸುವ ಜನ ನೆಮ್ಮದಿಯುಸಿರು ಬಿಡುವಂತಾಗಿದೆ.
ಕಾವೇರಿ ನದಿಗೆ ಕುಶಾಲನಗರದಲ್ಲಿ ಚರಂಡಿ ಮೂಲಕ ಕೆಲವು ಹೋಟೆಲ್ ಗಳು ಹಾಗೂ ಲಾಡ್ಜ್ ಗಳ ಮಾಲೀಕರು ಕಲ್ಮಶ ನೀರನ್ನು ಚರಂಡಿಗೆ ಹರಿದು ಬಿಡುತ್ತಿರುವುದು ಗೊತ್ತಿದ್ದರೂ ಸ್ಥಳೀಯ ಆಡಳಿತ ಕಣ್ಮುಚ್ಚಿ ಕುಳಿತಿತ್ತು ಎಂದರೆ ತಪ್ಪಾಗಲಾರದು. ಈ ಬಗ್ಗೆ ಹಲವರು ಆರೋಪಗಳನ್ನು ಮಾಡಿದ್ದರೂ ಕೂಡ ಯಾವುದೇ ಕ್ರಮ ಕೈಗೊಂಡಿರಲಿಲ್ಲ.
ಸದ್ಯ ಜಿಲ್ಲಾಧಿಕಾರಿಗಳು ಈ ಸಂಬಂಧ ಗಮನಹರಿಸಿ ಕ್ರಮ ಕೈಗೊಳ್ಳಲು ಆದೇಶಿಸಿದ ಮೇರೆಗೆ ಕುಶಾಲನಗರದ ಪುರಸಭೆಯ ಮುಖ್ಯ ಅಧಿಕಾರಿಗಳಾದ ಕೃಷ್ಣಪ್ರಸಾದ್ ಅವರು ನೇತೃತ್ವದಲ್ಲಿ ತಪಾಸಣೆ ನಡೆಸಿ ಅಧಿಕ ಮಟ್ಟದಲ್ಲಿ ಕಲ್ಮಶ ನೀರನ್ನು ಚರಂಡಿಗೆ ಅಕ್ರಮವಾಗಿ ಹರಿಸುತ್ತಿದ್ದ ಕುಶಾಲನಗರದ ಕೆಲವು ಹೋಟೆಲ್ ಗಳ ಪೈಪುಗಳನ್ನು ಮುಚ್ಚಿಸಿ ಕಲುಷಿತ ನೀರು ನದಿಗೆ ಹರಿಯುವುದನ್ನು ತಡೆ ಹಿಡಿಯಲಾಗಿದೆ. ಹಲವು ಬಾರಿ ಇವರಿಗೆ ಮುನ್ನೆಚ್ಚರಿಕೆ ನೀಡಿದರೂ ಕೂಡ ಯಾವುದೇ ರೀತಿಯ ಬದಲಿ ವ್ಯವಸ್ಥೆ ಮಾಡಿಕೊಳ್ಳದೆ ಅಧಿಕವಾಗಿ ಕಲ್ಮಶ ತ್ಯಾಜ್ಯವನ್ನು ಕಾನೂನು ಬಾಹಿರವಾಗಿ ಚರಂಡಿ ಮೂಲಕ ಕಾವೇರಿ ನದಿಗೆ ಹರಿಸಿರುವುದನ್ನು ಪತ್ತೆ ಹಚ್ಚಿ ಪುರಸಭಾ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.
ಈಗ ಕುಶಾಲನಗರದಲ್ಲಿ ಯುಜಿಡಿ ಕಾಮಗಾರಿ ಮೊದಲ ಹಂತದಲ್ಲಿ ಪೂರ್ಣಗೊಂಡಿದ್ದು ಮನೆಗಳಿಂದ ಬರುವ ಕಲ್ಮಶ ನೀರು ಚರಂಡಿ ಮೂಲಕ ಹರಿಯುವುದು ನಿಲುಗಡೆಗೊಂಡಿದೆ. ಇನ್ನೂ ಕೆಲವು ಹೋಟೆಲ್ ಗಳಿಂದ ಬರುವ ತ್ಯಾಜ್ಯ ನೀರುಗಳ ಹರಿಯುವಿಕೆ ಕುರಿತು ಸದ್ಯದಲ್ಲೇ ತಪಾಸಣೆ ನಡೆಸಲಾಗುವುದು ಎಂದು ಮುಖ್ಯ ಅಧಿಕಾರಿಗಳು ತಿಳಿಸಿದ್ದಾರೆ. ಯುಜಿಡಿ ಕಾಮಗಾರಿ ಸಂಪೂರ್ಣಗೊಂಡರೆ ಕುಶಾಲನಗರದಲ್ಲಿ ತ್ಯಾಜ್ಯ ಹರಿದು ನದಿಗೆ ಸೇರುವುದು ನಿಲ್ಲಲಿದೆ ಎಂದು ಹೇಳಿದ್ದಾರೆ.