ಕೇರಳ: ನಿಫಾ ವೈರಸ್ ಕಾಣಿಸಿಕೊಂಡು ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆ ತಾಲೂಕಿನ ಗಡಿ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಆರೋಗ್ಯ ಇಲಾಖೆಯಿಂದ ತಪಾಸಣೆ ಬಿಗಿಗೊಳಿಸಲಾಗಿದ್ದು, ಕೇರಳ ಗಡಿ ಮೂಲಕ ರಾಜ್ಯ ಪ್ರವೇಶಿಸುವ ಪ್ರತಿಯೊಂದು ವಾಹನಗಳಿಗೆ ಸ್ಯಾನಿಟೈಸರ್ ಸಿಂಪಡಣೆ ಮಾಡಲಾಗುತ್ತಿದೆ.
ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಹಂದಿ ಸೇರಿದಂತೆ ಮಾಂಸಾಹಾರ ಪದಾರ್ಥ ಸಾಗಿಸುವ ವಾಹನಗಳ ಮೇಲೆ ನಿಗಾ ವಹಿಸಲಾಗಿದ್ದು, ನಿಫಾ ವೈರಸ್ ರಾಜ್ಯಕ್ಕೆ ಹರಡದಂತೆ ತಡೆಯಲು ಎಲ್ಲಾ ಗೂಡ್ಸ್ ವಾಹನಗಳಿಗೆ ಸ್ಯಾನಿಟೈಸ್ ಮಾಡಲಾಗುತ್ತಿದೆ. ಜೊತೆಗೆ ಗುಂಡ್ಲುಪೇಟೆ ತಾಲ್ಲೂಕಿನ ಕೇರಳ ಗಡಿ ಅಂಚಿನ 158 ಗ್ರಾಮಗಳಲ್ಲಿ ವಿಶೇಷ ನಿಗಾ ಇಟ್ಟಿದ್ದು, ಪ್ರತಿ ಮನೆ ಮನೆಗೆ ತೆರಳಿ ಜನರ ಆರೊಗ್ಯ ತಪಾಸಣೆ ನಡೆಸಲು ಆರೋಗ್ಯ ಇಲಾಖೆ ಸಿದ್ದತೆ ನಡೆಸಿದೆ. ಈ ಮಧ್ಯೆ ಗುಂಡ್ಲುಪೇಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಮೂರು ಹಾಸಿಗೆಗಳ ವಿಶೇಷ ವಾರ್ಡ್ ತೆರೆಯಲು ಕೂಡ ತಾಲೂಕು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ವಿಶ್ವೇಶ್ವರಯ್ಯ ಮಾತನಾಡಿ, ನಿಫಾ ವೈರಸ್ ಕೇರಳದಲ್ಲಿ ಇಬ್ಬರಿಗೆ ಕಾಣಿಸಿಕೊಂಡು ಸಾವನ್ನಪ್ಪಿರುವ ಹಿನ್ನೆಲೆ ಗುಂಡ್ಲುಪೇಟೆ ತಾಲೂಕಿನ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ತಪಾಸಣೆ ಬಿಗಿ ಗೊಳಿಸಲಾಗಿದೆ. ಕೇರಳದಿಂದ ಬರುವ ಹಂದಿಗಳ ಸಾಗಣೆ ಸೇರಿದಂತೆ ಇನ್ನಿತರ ವಾಹನಗಳಿಗೆ ಸ್ಯಾನಿಟೈಸರ್ ಸಿಂಪಡಿಸಲಾಗುತ್ತಿದೆ. ಜೊತೆಗೆ ಸುತ್ತಮುತ್ತಲಿನ ಸುಮಾರು 158 ಹಳ್ಳಿಯಲ್ಲಿರುವ ಆಶಾ ಕಾರ್ಯಕರ್ತೆಯರು, ಕಮ್ಯೂನಿಟಿ ಹೆಲ್ತ್ ಆಫೀಸರ್ ಗಳಿಗೆ ನಿರ್ದೇಶನ ನೀಡಲಾಗಿದ್ದು, ನಾಳೆಯಿಂದ ಪ್ರತಿ ಮನೆ ಮನೆಗೂ ಭೇಟಿ ನೀಡಿ ರೋಗದ ಲಕ್ಷಣ ಕಂಡು ಬಂದರೆ ಸ್ವಾಬ್ ಟೆಸ್ಟ್ ಮಾಡುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.