ಶ್ರೀಲಂಕಾ: ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 37 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರ ಐದು ದೋಣಿಗಳನ್ನು ಇದೀಗ ಶ್ರೀಲಂಕಾ ನೌಕಾಪಡೆಯು ಇಂದು (ಅ.29) ವಶಪಡಿಸಿಕೊಂಡಿದೆ. ಈ ವಿಷಯದ ಗೌಪ್ಯ ಮೂಲಗಳ ಪ್ರಕಾರ, ಶ್ರೀಲಂಕಾದ ಕಡಲಿನಲ್ಲಿ ಚೀನಾದ ನೌಕಾಪಡೆಯ ಬೇಹುಗಾರಿಕಾ ಹಡಗು ಲಂಗರು ಹಾಕಿದ ಬೆನ್ನಲ್ಲೇ ನೌಕಾಪಡೆಯು ಗಸ್ತು ಚಟುವಟಿಕೆಗಳನ್ನು ಮತ್ತಷ್ಟು ತೀವ್ರಗೊಳಿಸಿದೆ.
ಘಟನೆಯೊಂದರಲ್ಲಿ, ಶ್ರೀಲಂಕಾ ನೌಕಾಪಡೆಯ ಬಹು ತಂಡಗಳು ತಲೈಮನ್ನಾರ್ ಬಳಿ ಮೀನುಗಾರಿಕೆ ನಡೆಸುತ್ತಿದ್ದ ರಾಮೇಶ್ವರಂನಿಂದ 23 ಭಾರತೀಯ ಮೀನುಗಾರರನ್ನು ಸುತ್ತುವರೆದು, ತದನಂತರ ಅವರನ್ನು ಬಂಧಿಸಿದೆ. ಮೀನುಗಾರರ ಮೂರು ದೋಣಿಗಳನ್ನು ತಲೈಮನ್ನಾರ್ ನೌಕಾ ಶಿಬಿರಕ್ಕೆ ಕರೆದೊಯ್ಯುವ ಮುನ್ನ ವಶಪಡಿಸಿಕೊಂಡಿದೆ.
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ನೆಡುಂತೀವು ಬಳಿ 14 ಮೀನುಗಾರರನ್ನು ಬಂಧಿಸಲಾಗಿದ್ದು, ಅವರ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಅವರನ್ನು ಮಾಯಿಲಟ್ಟಿ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಅಕ್ಟೋಬರ್ 14 ರಿಂದ ಇಲ್ಲಿಯವರೆಗೂ ಶ್ರೀಲಂಕಾ ನೌಕಾಪಡೆಯು 64 ಮೀನುಗಾರರನ್ನು ಬಂಧಿಸಿದೆ ಮತ್ತು ಪ್ರತ್ಯೇಕ ಘಟನೆಗಳಲ್ಲಿ 10 ದೋಣಿಗಳನ್ನು ವಶಪಡಿಸಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.