ದೆಹಲಿ: ಅಬಕಾರಿ ನೀತಿ ಹಗರಣದಲ್ಲಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅರೆಸ್ಟ್ ಆಗಿದ್ದಾರೆ. 9 ಬಾರಿ ಇಡಿ ಸಮನ್ಸ್ ಕೊಟ್ಟಿದ್ದರೂ ವಿಚಾರಣೆಗೆ ಗೈರಾಗಿದ್ದ ಕೇಜ್ರಿವಾಲ್, ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ ಹೈಕೋರ್ಟ್, ಕೇಜ್ರಿವಾಲ್ ಮನವಿ ತಿರಸ್ಕರಿಸಿತ್ತು.
ಈ ಹಿನ್ನೆಲೆಯಲ್ಲಿ ಕಳೆದ ದಿನ ಸಂಜೆ ವೇಳೆಗೆ ದೆಹಲಿ ಸಿಎಂ ನಿವಾಸಕ್ಕೆ ತೆರಳಿದ್ದ ಇಡಿ ಅಧಿಕಾರಿಗಳು ಸುಮಾರು 2 ಗಂಟೆಗಳ ಕಾಲ ವಿಚಾರಣೆ ನಡೆಸಿದರು. ಬಳಿಕ ಅರವಿಂದ್ ಕೇಜ್ರಿವಾಲ್ ಅವರನ್ನು ಅರೆಸ್ಟ್ ಮಾಡಿ, ಕರೆದೊಯ್ದರು.
ಇದರೊಂದಿಗೆ ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಒಟ್ಟು ಐವರನ್ನು ಅರೆಸ್ಟ್ ಮಾಡಿದಂತಾಗಿದೆ. ಕೇಜ್ರಿವಾಲ್ ಸ್ವತಂತ್ರ ಭಾರತದ ಇತಿಹಾಸದಲ್ಲಿ ಬಂಧನಕ್ಕೊಳಗಾಗಿ ಮೊದಲ ಸೇವೆ ಸಲ್ಲಿಸುತ್ತಿರುವ ಮುಖ್ಯಮಂತ್ರಿಯಾಗಿದ್ದಾರೆ.
ಕೇಜ್ರಿವಾಲ್ ನಿವಾಸಕ್ಕೆ ತೆರಳಿದ್ದ ಇಡಿ ಅಧಿಕಾರಿಗಳು, ವಿಚಾರಣೆ ನಡೆಸಿದರು. ಈ ವೇಳೆ ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ರನ್ನ ಬಂಧಿಸಲಾಗಿದೆ.
ಇದು ಅಬಕಾರಿ ವ್ಯವಹಾರದಲ್ಲಿ ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಟ್ಟಿದ್ದ ನೀತಿ ಎನ್ನುವುದು ಆರೋಪ. ಖಾಸಗಿ ಸಂಸ್ಥೆಗಳು ರೀಟೇಲ್ ಲಿಕ್ಕರ್ ವಲಯಕ್ಕೆ ಪ್ರವೇಶಿಸಲು ಅನುಕೂಲ ಮಾಡಿಕೊಡುವಂತೆ ದೆಹಲಿ ಅಬಕಾರಿ ನೀತಿ 2021-22 ಅನ್ನು ಕೇಜ್ರಿವಾಲ್ ನೇತೃತ್ವದ ಎಎಪಿ ಸರ್ಕಾರ ಅನುಷ್ಠಾನಗೊಳಿಸಿದ್ದು, ಇದರಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಲಾಗಿದೆ. ಎಲ್-1 ಪರವಾನಗಿಯನ್ನು ಅನುಮೋದನೆ ಇಲ್ಲದೆಯೇ ವಿಸ್ತರಿಸುವಲ್ಲಿ ಲಂಚ ಪಡೆಯಲಾಗಿದೆ.
ಲಂಚ ಪಡೆದು ಕಂಪೆನಿಗಳಿಗೆ ಸಾಕಷ್ಟು ಅನುಕೂಲ ಮಾಡಿಕೊಡಲಾಗಿದೆ ಎಂಬ ಗಂಭೀರ ಆರೋಪ ದೆಹಲಿ ಸರ್ಕಾರದ ಮೇಲಿದೆ. ಈ ಪ್ರಕರಣವು 2021-22ರ ದೆಹಲಿ ಸರ್ಕಾರದ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಕಾರ್ಯಗತಗೊಳಿಸುವಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದೆ, ನಂತರ ಅದನ್ನು ರದ್ದುಗೊಳಿಸಲಾಯಿತು. ಎಎಪಿ ನಾಯಕರು ಅಬಕಾರಿ ನೀತಿಯಲ್ಲಿ 100 ಕೋಟಿ ರೂಪಾಯಿ ಕಿಕ್ಬ್ಯಾಕ್ ಪಡೆದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.