ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ಪಿಡುಗನ್ನು ನಿರ್ಮೂಲನೆ ಮಾಡುವ ಸರ್ಕಾರದ ಪ್ರಯತ್ನಗಳ ಭಾಗವಾಗಿ ಏಕೈಕ ಹೆಣ್ಣು ಮಗುವಿನ ಪೋಷಕರಿಗೆ ₹2 ಲಕ್ಷ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಹೇಳಿದ್ದಾರೆ.ಇಂದಿರಾ ಗಾಂಧಿ ಬಾಲಿಕಾ ಸುರಕ್ಷಾ ಯೋಜನೆಯಡಿ ಪ್ರೋತ್ಸಾಹಧನವನ್ನು ಈಗಿರುವ ₹35,000 ದಿಂದ ₹2 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಸುಖು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರೋಗ್ಯ ಸುರಕ್ಷತೆ ಮತ್ತು ನಿಯಂತ್ರಣ ನಿರ್ದೇಶನಾಲಯವು ಆಯೋಜಿಸಿದ್ದ ಎರಡು ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ಒಂದು ಹೆಣ್ಣು ಮಗು ಜನಿಸಿದ ನಂತರ ಕುಟುಂಬ ಯೋಜನೆ ಅಳವಡಿಸಿಕೊಳ್ಳುವ ಪೋಷಕರಿಗೆ ₹2 ಲಕ್ಷ, ಎರಡು ಹೆಣ್ಣು ಮಕ್ಕಳ ನಂತರ ಇನ್ನೊಂದು ಮಗು ಬೇಡ ಎಂದು ನಿರ್ಧರಿಸುವವರಿಗೆ ₹1 ಲಕ್ಷ ನೀಡಲಾಗುವುದು ಎಂದು ಸುಖು ತಿಳಿಸಿದ್ದಾರೆ.