ಶಿಮ್ಲಾ: ಹಿಮಾಚಲ ಪ್ರದೇಶದ ಸಮ್ಮರ್ ಹಿಲ್ನಲ್ಲಿರುವ ಶಿವದೇವಾಲಯ ಭಾರಿ ಭೂ ಕುಸಿತದೊಂದಿಗೆ ಕೊಚ್ಚಿಹೋಗಿದ್ದು, ಅದೇ ಸ್ಥಳದಲ್ಲಿ ನಾಲ್ಕನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ರಕ್ಷಣಾ ಸಿಬ್ಬಂದಿ ಗುರುವಾರ ಮತ್ತೊಂದು ಮೃತದೇಹವನ್ನು ಹೊರತೆಗೆದಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 14ಕ್ಕೆ ಏರಿದೆ. ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯದ ಪ್ರಾಧ್ಯಾಪಕರ ಮೃತದೇಹವನ್ನು ರಕ್ಷಣಾ ಸಿಬ್ಬಂದಿ ದುರಂತ ಸ್ಥಳದಿಂದ ಎರಡು ಕಿಮೀ ದೂರದಿಂದ ಹೊರತೆಗೆದಿದ್ದಾರೆ.
ದುರಂತ ಸಂಭವಿಸಿದಾಗ ಸಮ್ಮರ್ ಹಿಲ್ನಲ್ಲಿರುವ ಶಿವ ಬಾವಡಿ ದೇವಸ್ಥಾನದ ಒಳಗಿದ್ದ ಮೂವರು ಮಕ್ಕಳನ್ನು ಒಳಗೊಂಡ ಒಂದೇ ಕುಟುಂಬದ ಏಳು ಮಂದಿ ಮೃತಪಟ್ಟಿದ್ದಾರೆ ಎಂದು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿಗಳು ತಿಳಿಸಿದ್ದಾರೆ. ಸಮ್ಮರ್ ಹಿಲ್ ಮಾರುಕಟ್ಟೆಯಲ್ಲಿ ಅಂಗಡಿ ಹೊಂದಿರುವ 60 ವರ್ಷದ ಪವನ್ ಶರ್ಮಾ ಕುಟುಂಬದ 7 ಮಂದಿ ಹವನಕ್ಕಾಗಿ ದೇವಳಕ್ಕೆ ಬಂದಿದ್ದು, ಈ ವೇಳೆಯೇ ದುರಂತ ಸಂಭವಿಸಿ ಮೃತಪಟ್ಟಿದ್ದಾರೆ.
ಅದೇ ರೀತಿ ಶಿಮ್ಲಾ ಫಾಗ್ಲಿಯಲ್ಲಿ ಮತ್ತೊಂದು ಭೂಕುಸಿತ ಸಂಭವಿಸಿ ಐದು ಮಂದಿ ಸಾವನ್ನಪ್ಪಿದ್ದಾರೆ. ಶಿಮ್ಲಾದ ಹಳೆಯ ಬಸ್ ನಿಲ್ದಾಣದ ಸಮೀಪವಿರುವ ಕೃಷ್ಣಾನಗರ ಪ್ರದೇಶದಲ್ಲಿ ಕನಿಷ್ಠ ಐದು ಮನೆಗಳು ಕುಸಿದು ಇಬ್ಬರು ಸಾವನ್ನಪ್ಪಿದರು.