ಚಂಡೀಗಢ : ಕಠೋರ ತಾಯಿಯೊಬ್ಬಳು ಹೆತ್ತ ಮಗನನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ಹರ್ಯಾಣದ ಯಮುನಾ ನಗರದ ಜಯಧಾರಿ ಗ್ರಾಮದಲ್ಲಿ ನಡೆದಿದೆ.ಕನ್ಹಯ್ಯಾ (6) ತಾಯಿಯಿಂದ ಕೊಲೆಗಿಡಾದ ಬಾಲಕ. ವರದಿಯ ಪ್ರಕಾರ ಬಾಲಕನ ತಂದೆ ಜಯಧಾರಿ ಗ್ರಾಮದ ನಿವಾಸಿ ಧರಂವೀರ್ ಅವರು ಕೆಲಸಕ್ಕೆ ಹೋಗಿದ್ದಾಗ ತಾಯಿ ಕೃತ್ಯ ಎಸಗಿದ್ದಾಳೆ.ಈ ವೇಳೆ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಮಗನನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ವೈದ್ಯರು ಅವನು ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ.
ವಿಷಯ ತಿಳಿದ ಅಸಹಾಯಕ ತಂದೆ ಆಸ್ಪತ್ರೆಯ ಹೊರಗೆ ಅಳಲು ಪ್ರಾರಂಭಿಸಿದ್ದಾರೆ. ಅಮಾಯಕ ಬಾಲಕನನ್ನು ಕತ್ತು ಹಿಸುಕಿ ಸಾಯಿಸಿದ್ದಾಳೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಬಾಲಕನ ದೇಹದ ಮೇಲೆ ಕತ್ತು ಹಿಸುಕಿದ ಗುರುತುಗಳು ಪತ್ತೆಯಾಗಿವೆ. ಇನ್ನೂ ತಾಯಿಯು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಳೆ ಎಂದು ತನಿಖಾಧಿಕಾರಿ ಸಂದೀಪ್ ಹೇಳಿದ್ದಾರೆ.ಧರಂವೀರ್ ಕಷ್ಟಪಟ್ಟು ದುಡಿದು ತನ್ನ ಕುಟುಂಬವನ್ನು ಪೋಷಿಸುತ್ತಿದ್ದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಮೃತಪಟ್ಟ ಬಾಲಕ ಆಕೆಯ ಕಿರಿಯ ಮಗನಾಗಿದ್ದನು.