ದೆಹಲಿ: ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಲು ನಿರಾಕರಿಸಿದ ಸುಪ್ರೀಂ ಕೋರ್ಟ್ ತೀರ್ಪುನ್ನು ಮತ್ತೆ ಮರುಪರಿಶೀಲನೆ ಮಾಡಬೇಕು ಎಂಬ ಅರ್ಜಿಯನ್ನು ನವೆಂಬರ್ 28ಕ್ಕೆ ವಿಚಾರಣೆ ನಡೆಸುವುದಾಗಿ ಇಂದು (ನ.23) ಸುಪ್ರೀಂ ಕೋರ್ಟ್ ಹೇಳಿದೆ.
ಅರ್ಜಿದಾರರ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ಭಾರತದ ಮುಖ್ಯನ್ಯಾಯಮೂರ್ತಿ ಡಿವೈ ಚಂದ್ರಚೂಡ ಹಾಗೂ ಮತ್ತಿಬ್ಬರು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠದ ಮುಂದೆ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ಎಲ್ಲಾ ನ್ಯಾಯಾಧೀಶರು (ತೀರ್ಪು ನೀಡಿದ ಸಂವಿಧಾನ ಪೀಠದಲ್ಲಿ) ತಾರತಮ್ಯವಿದೆ ಎಂದು ಒಪ್ಪಿಕೊಂಡಿದ್ದಾರೆ ಮತ್ತು ತಾರತಮ್ಯ ಇದ್ದರೆ ಅದಕ್ಕೆ ಪರಿಹಾರ ಇರಬೇಕು ಎಂದು ಅವರು ಹೇಳಿದರು.
ಹೆಚ್ಚಿನ ಸಂಖ್ಯೆಯ ಜನರ ಜೀವನವು ಇದರ ಮೇಲೆ ಅವಲಂಬಿತವಾಗಿದೆ ಎಂದು ರೋಹಟಗಿ ಪ್ರತಿಪಾದಿಸಿದರು. ತೆರೆದ ನ್ಯಾಯಾಲಯದ ವಿಚಾರಣೆಗೆ ಅವಕಾಶ ನೀಡುವಂತೆಯೂ ಅವರು ಪೀಠವನ್ನು ಕೋರಿದರು. ಈ ವಿಷಯವನ್ನು ನವೆಂಬರ್ 28 ರಂದು ಪರಿಗಣನೆಗೆ ಪಟ್ಟಿ ಮಾಡಲಾಗಿದೆ ಎಂದು ವಕೀಲರು ಹೇಳಿದರು. ಅದನ್ನು ನೋಡಿ ತೀರ್ಮಾನ ಮಾಡುತ್ತೇವೆ ಎಂದು ಪೀಠ ಹೇಳಿದೆ.