ದೆಹಲಿ: ಮಣಿಪುರದಲ್ಲಿ ನಾಯಕತ್ವ ಬದಲಾವಣೆಯ ಎಲ್ಲಾ ಊಹಾಪೋಹಗಳಿಗೆ ತೆರೆ ಎಳೆದಿರುವ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ಈ “ನಿರ್ಣಾಯಕ ಘಟ್ಟದಲ್ಲಿ” ರಾಜೀನಾಮೆ ನೀಡುವುದಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ. “ಈ ನಿರ್ಣಾಯಕ ಹಂತದಲ್ಲಿ, ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ಸುಮಾರು ಎರಡು ತಿಂಗಳ ಕಾಲ ನಡೆದ ಜನಾಂಗೀಯ ಹಿಂಸಾಚಾರದ ನಡುವೆ, ಶುಕ್ರವಾರ ಬೆಳಿಗ್ಗೆಯಿಂದ, ಬಿರೇನ್ ಸಿಂಗ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರೆ ಎಂಬ ಊಹಾಪೋಹಗಳು ಮತ್ತು ಮಾಧ್ಯಮ ವರದಿಗಳು ಇದ್ದವು. ಬಿರೇನ್ ಸಿಂಗ್ ಅವರು ಹಲವು ಸಚಿವರು ಮತ್ತು ಮುಖಂಡರೊಂದಿಗೆ ಮಧ್ಯಾಹ್ನ 2.30 ರ ಸುಮಾರಿಗೆ ತಮ್ಮ ಅಧಿಕೃತ ಬಂಗಲೆಯಿಂದ ಹೊರಬಂದರು. ಅವರ ವಾಹನ ರಾಜಭವನದ ಕಡೆಗೆ ಚಲಿಸಲು ಪ್ರಯತ್ನಿಸಿದಾಗ, ಸಾವಿರಾರು ಜನರು, ಅದರಲ್ಲಿಯೂ ಹೆಚ್ಚಾಗಿ ಮಹಿಳೆಯರಿದ್ದ ಗುಂಪು ಅವರ ಕಾರನ್ನು ಸುತ್ತುವರೆದು ಅವರನ್ನು ತಡೆಯಿತು.
ಈ ನಡುವೆ ಕೆಲವು ಮಾಧ್ಯಮಗಳು ರಾಜ್ಯಪಾಲರನ್ನು ಉದ್ದೇಶಿಸಿ ಸಿಂಗ್ ಅವರ ರಾಜೀನಾಮೆ ಪತ್ರವನ್ನು ಪ್ರದರ್ಶಿಸಿದವು. ಮಣಿಪುರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮತ್ತು ಸರ್ಕಾರದ ವಕ್ತಾರ ಸಪಂ ರಂಜನ್ ಸಿಂಗ್ ಮಾತನಾಡಿ, ಭಾರಿ ಜನಸಮೂಹವು ಮುಖ್ಯಮಂತ್ರಿಯನ್ನು ರಾಜಭವನಕ್ಕೆ ಹೋಗದಂತೆ ತಡೆಯಿತು.