ನವದೆಹಲಿ: ಅಹಮದಾಬಾದ್ನಲ್ಲಿ ಶನಿವಾರ ನಡೆದ ಭಾರತ-ಪಾಕಿಸ್ತಾನ ವಿಶ್ವಕಪ್ ಪಂದ್ಯದ ವೇಳೆ ಪಾಕಿಸ್ತಾನ ಕ್ರಿಕೆಟಿಗನನ್ನು ಅಣಕಿಸಲು ‘ಜೈ ಶ್ರೀ ರಾಮ್’ ಘೋಷಣೆ ಕೂಗಿರುವುದಕ್ಕೆ ಡಿಎಂಕೆ ನಾಯಕ ಮತ್ತು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಆಕ್ಷೇಪ ವ್ಯಕ್ತಪಡಿಸಿ ಘೋಷಣೆ ಕೂಗಿದವರನ್ನು ಟೀಕಿಸಿದ್ದಾರೆ.
ಶನಿವಾರ ನಡೆದ ಭಾರತ -ಪಾಕ್ ಪಂದ್ಯದಲ್ಲಿ ಭಾರತ 7 ವಿಕೇಟ್ ಅಂತರದಲ್ಲಿ ಪಾಕ್ ವಿರುದ್ಧ ಜಯ ಗಳಿಸಿತ್ತು. ಇನ್ನು ಈ ಘಟನೆ ಪಾಕ್ ಇನಿಂಗ್ಸ್ ಸಮಯದಲ್ಲಿ ನಡೆದಿದೆ. ಪಾಕ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ರಿಜ್ವಾನ್ 49 ರನ್ ಪಡೆದು, ಔಟ್ ಆಗಿ, ಪೆವಿಲಿಯನ್ಗೆ ಹೋಗುತ್ತಿರುವಾಗ ಅಭಿಮಾನಿಗಳು ‘ಜೈ ಶ್ರೀರಾಮ್’ ಘೋಷಣೆ ಹಾಕಿದ್ದಾರೆ.
ಇದೀಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಈ ಘೋಷಣೆಯನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಸಮರ್ಥಿಸಿಕೊಂಡಿದ್ದಾರೆ. ಪಾಕ್ ಆಟಗಾರರು ಮೈದಾನದಲ್ಲಿ ನಮಾಜ್ ಮಾಡಬಹುದಾದರೆ, ನಾವು ಯಾಕೆ ‘ಜೈ ಶ್ರೀರಾಮ್’ ಘೋಷಣೆ ಕೂಗಬಾರದು ಎಂದು ಕಮೆಂಟ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ಭಾರತ ಕ್ರೀಡಾ ಕ್ಷೇತ್ರ ಒಳ್ಳೆಯ ಮನೋಭಾವವನ್ನು ಹೊಂದಿದೆ. ಭಾರತ “ಅತಿಥಿ ದೇವೋ ಭವ” ಎಂಬ ದಾರಿಯಲ್ಲಿ ನಡೆಯುತ್ತಿರುವಾಗ, ಇಂತಹ ಕೆಲಸ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಭಾರತವು ನೈಜ ಕ್ರೀಡಾಸ್ಫೂರ್ತಿ ಮತ್ತು ಆತಿಥ್ಯಕ್ಕೆ ಹೆಸರುವಾಸಿಯಾಗಿದೆ. ಆದರೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪಾಕಿಸ್ತಾನದ ಆಟಗಾರರೊಂದಿಗೆ ನಡೆದುಕೊಂಡ ರೀತಿ ಸ್ವೀಕಾರಾರ್ಹವಲ್ಲ. ಇದರಿಂದ ಕ್ರೀಡಾ ಮೌಲ್ಯ ಕಡಿಮೆಯಾಗಿದೆ. ಕ್ರೀಡೆಗಳು ದೇಶಗಳ ನಡುವೆ ಒಗ್ಗೂಡಿಸುವ ಶಕ್ತಿಯಾಗಬೇಕು, ನಿಜವಾದ ಸಹೋದರತ್ವವನ್ನು ಬೆಳೆಸಬೇಕು. ದ್ವೇಷವನ್ನು ಹರಡುವ ಸಾಧನವಾಗಿ ಕ್ರೀಡೆಯನ್ನು ಬಳಸುತ್ತಿರುವುದು ಖಂಡನೀಯ ಎಂದು ಟ್ವೀಟ್ ಮಾಡಿದ್ದಾರೆ.