ಚಾಮರಾಜನಗರ: ಹಲವು ದಿನಗಳಿಂದ ಗ್ರಾಮಸ್ಥರಿಗೆ ಉಪಟಳ ನೀಡುತ್ತಿದ್ದ ಚಿರತೆಯನ್ನು ಅರಣ್ಯ ಇಲಾಖೆಯವರು ಸೆರೆ ಹಿಡಿಯುವಲ್ಲಿ ಯಶ್ವಸಿಯಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಗುಂಡೇಗಾಲದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಗುಂಡೇಗಾಲ ಗ್ರಾಮದಲ್ಲಿ ಹಲವಾರು ದಿನಗಳಿಂದ ಚಿರತೆಯೊಂದು ಕಾಡಿನಿಂದ ಬಂದು ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುವುದಲ್ಲೇ ಮನುಷ್ಯರ ಮೇಲೂ ದಾಳಿ ಮಾಡಿತ್ತು. ಚಿರತೆಯ ದಾಳಿಯಿಂದ ಕಂಗೆಟ್ಟಿದ್ದ ಗ್ರಾಮಸ್ಥರು ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಅಧಿಕಾರಿಗಳನ್ನು ಆಗ್ರಹಿಸಿದ್ದರು.
ಗ್ರಾಮಸ್ಥರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಕೊಳ್ಳೇಗಾಲದ ಮಲೆ ಮಹದೇಶ್ವರ ವನ್ಯ ಜೀವಿಧಾಮದ ಅರಣ್ಯಾಧಿಕಾರಿಗಳು ಗುಂಡೇಗಾಲ ಸಮೀಪ ಚಿರತೆ ಸೆರೆಗೆ ಬೋನಿಟ್ಟದ್ದರು. ಬೇಟೆಗೆ ಬಂದ ಚಿರತೆ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದ್ದು, ಸೆರೆ ಸಿಕ್ಕ ಚಿರತೆಯಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.