ಹೊಸದಿಲ್ಲಿ: ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನುನ್ ಭಾರತವನ್ನು ವಿಭಜಿಸಿ ಹಲವು ದೇಶಗಳನ್ನಾಗಿ ಮಾಡಲು ಬಯಸಿದ್ದಾನೆ ಎಂದು ಗುಪ್ತಚರ ಮೂಲಗಳು ಹೇಳಿವೆ.
ರಾಷ್ಟ್ರೀಯ ತನಿಖಾ ಪ್ರಕಾರ, ನಿಷೇಧಿತ ಪ್ರತ್ಯೇಕತಾವಾದಿ ಗುಂಪಿನ ಸಿಖ್ಸ್ ಫಾರ್ ಜಸ್ಟಿಸ್ನ ಮುಖ್ಯಸ್ಥ ಕಾಶ್ಮೀರದ ಜನರಿಗೆ ಪ್ರತ್ಯೇಕ ಮುಸ್ಲಿಂ ದೇಶ ರಚನೆಗಾಗಿ ಮಸಲತ್ತು ನಡೆಸುತ್ತಿದ್ದಾನೆ ಎಂಬುದು ತಿಳಿದು ಬಂದಿದೆ.
ಇದೇ ಕಾರಣಕ್ಕಾಗಿ ಜುಲೈ 2020 ರಲ್ಲಿ ಕೇಂದ್ರ ಗೃಹ ಸಚಿವಾಲಯವು ಪನ್ನುನ್ನನ್ನು ಭಯೋತ್ಪಾದಕ ಎಂದು ಘೋಷಿಸಿತ್ತು. ಅಲ್ಲದೆ ಆತನಿಗಾಗಿ ರೆಡ್ ಕಾರ್ನರ್ ನೋಟಿಸ್ ಅನ್ನು ಕಳುಹಿಸಲಾಗಿತ್ತು. ಆದರೆ ಕೆನಡಾ ಸರ್ಕಾರ ಇದನ್ನು ತಿರಸ್ಕರಿಸಿತ್ತು. ಪನ್ನೂನ್ ಕಳೆದ ವರ್ಷ ಹಿಮಾಚಲ ಪ್ರದೇಶ ಅಸೆಂಬ್ಲಿಯ ಗೋಡೆಗಳ ಮೇಲೆ ‘ಖಲಿಸ್ತಾನ್ ಪರ’ ಬ್ಯಾನರ್ ಅಭಿಯಾನದ ಮಾಸ್ಟರ್ ಮೈಂಡ್ ಆಗಿದ್ದ ಎಂದು ಎನ್ ಐಎ ಹೇಳಿದೆ.
ಪನ್ನುನ್ ಮುಸ್ಲಿಮರ ಓಲೈಕೆಗಾಗಿ ಪ್ರತ್ಯೇಕ ‘ಉರ್ದುಸ್ತಾನ್ ಪ್ರಜಾಸತ್ತಾತ್ಮಕ ಗಣರಾಜ್ಯ’ ಎಂದು ಹೆಸರಿಸಿರುವ ಮುಸ್ಲಿಂ ದೇಶ ರಚನೆಗೆ ಸಂಚು ರೂಪಿಸಿರುವ ಅಂಶ ತನಿಖೆಯಲ್ಲಿ ಬಯಲಾಗಿದೆ. ಇದಕ್ಕಾಗಿ ಕಾಶ್ಮೀರದ ಜನರನ್ನು ಪ್ರೇರೇಪಿಸುತ್ತಿದ್ದ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಪನ್ನುನ್ ವಿರುದ್ಧ ಪಂಜಾಬ್, ದೆಹಲಿ ಮತ್ತು ಹಿಮಾಚಲ ಪ್ರದೇಶ, ಹರಿಯಾಣ ಮತ್ತು ಉತ್ತರಾಖಂಡದಲ್ಲಿ 16 ಪ್ರಕರಣ ದಾಖಲಾಗಿದೆ.