ನವದೆಹಲಿ: 2019 ರ ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರಕರಣದ ತನಿಖೆ ನಡೆಸಿದ್ದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಂಡದ ಹಿರಿಯ ಪೊಲೀಸ್ ಅಧಿಕಾರಿ ರಾಕೇಶ್ ಬಲ್ವಾಲ್ ಅವರನ್ನು ಕೇಂದ್ರ ಗೃಹಸಚಿವಾಲಯ ಹಿಂಸಾಚಾರ ಪೀಡಿತ ಮಣಿಪುರಕ್ಕೆ ವರ್ಗಾಯಿಸಿದೆ.
ಮಣಿಪುರ ಕೇಡರ್ನ 2012ರ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿರುವ ಬಲ್ವಾಲ್ ಅವರು 2021ರಲ್ಲಿ ಶ್ರೀನಗರದಲ್ಲಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಎಸ್ಪಿ) ಅಧಿಕಾರ ವಹಿಸಿಕೊಂಡಿದ್ದರು. ಬಲ್ವಾಲ್ ಈ ಹಿಂದೆ ಮೂರುವರೆ ವರ್ಷಗಳ ಕಾಲ ಎನ್ಐಎಗೆ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಎಸ್ಪಿ) ಸೇವೆ ಸಲ್ಲಿಸಿದ್ದರು, ಅಲ್ಲಿ ಅವರು 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯ ತನಿಖೆ ನಡೆಸಿದ ತಂಡದ ಭಾಗವಾಗಿದ್ದರು.
ಮಣಿಪುರದಲ್ಲಿ ಇಬ್ಬರು ವಿದ್ಯಾರ್ಥಿಗಳ ಹತ್ಯೆ ಬಳಿಕ ಪ್ರತಿಭಟನೆಗಳು ಹೆಚ್ಚುತ್ತಿವೆ. ಅಲ್ಲದೆ ಮಣಿಪುರ ಸರ್ಕಾರವು ಮಂಗಳವಾರ ಮತ್ತೊಮ್ಮೆ ಇಂಟರ್ನೆಟ್ ಸೇವೆಗಳನ್ನು ಅಕ್ಟೋಬರ್ 1 ರವರೆಗೆ ಸ್ಥಗಿತಗೊಳಿಸಿದೆ. ಈ ನಿಟ್ಟಿನಲ್ಲಿ ಪರಿಸ್ಥಿತಿ ನಿಯಂತ್ರಣಕ್ಕಾಗಿ ಕೇಂದ್ರ ಗೃಹಸಚಿವಾಲಯ ಬಲ್ವಾಲ್ ಅವರನ್ನು ಮಣಿಪುರಕ್ಕೆ ವರ್ಗಾಯಿಸಿದೆ.