ಬೆಂಗಳೂರು: ಮಳೆ ಕೊರತೆಯಿಂದ ರಾಜ್ಯದಲ್ಲಿ ಈ ಬಾರಿ 28 ಸಾವಿರ ಕೋಟಿ ರೂ. ಮೌಲ್ಯದ ಬೆಳೆ ನಷ್ಟ ಸಂಭವಿಸಿದ್ದು, ಆಹಾರ ಧಾನ್ಯಗಳ ಉತ್ಪಾದನೆ ಶೇ. 50ರಷ್ಟು ತಗ್ಗಿದೆ. ಪೂರ್ವ ಮುಂಗಾರು, ಮುಂಗಾರು ಹಾಗೂ ಹಿಂಗಾರು ಬಿತ್ತನೆ ಗುರಿಯಂತೆ ಈ ವರ್ಷ 1 ಲಕ್ಷ 16 ಸಾವಿರ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆ ನಿರೀಕ್ಷಿಸಲಾಗಿತ್ತು. ಈ ಪೈಕಿ ಸುಮಾರು 59 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಕುಸಿತ ಖಚಿತವಾಗಿದೆ ಎಂದು ಕೃಷಿ ಸಚಿವ ಎನ್. ಚೆಲುವರಾಯಸ್ವಾಮಿ ಹೇಳಿದ್ದಾರೆ.
ರಾಜ್ಯದಲ್ಲಿ ಒಟ್ಟು 40 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ಹಾನಿಯಾಗಿದೆ. ಒಟ್ಟು ಬೆಳೆ ಪ್ರಮಾಣದಲ್ಲಿ ಶೇ. 50% ಹಾನಿಯಾಗಿರುವುದು ಕಂಡು ಬಂದಿದೆ. ಭತ್ತ ರಾಗಿ ಜೋಳ ಸೇರಿದಂತೆ ಆಹಾರ ಧಾನ್ಯಗಳ ಬೆಳೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿದೆ. ಈ ಕಾರಣದಿಂದಾಗಿಯೇ ಆಹಾರ ಧಾನ್ಯಗಳ ಬೆಲೆ ಏರಿಕೆಯಾಗುವ ಸಾಧ್ಯತೆಯೂ ಇದೆ.
ಬೆಳೆ ಸಮೀಕ್ಷೆ ವರದಿ ಈ ತಿಂಗಳಾಂತ್ಯಕ್ಕೆ ಸಿದ್ಧವಾಗಲಿದೆ. ಸೆ. 30ರೊಳಗೆ ಎಲ್ಲ ಜಿಲ್ಲೆಗಳ ವರದಿ ಸರಕಾರದ ಕೈಸೇರಲಿದ್ದು, ಮಾರ್ಗಸೂಚಿಯಂತೆ ನೆರವು ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು. ಪ್ರತಿ ಹೆಕ್ಟೇರ್ ಖುಷ್ಕಿ ಬೆಳೆಗೆ 13,600 ರೂ., ನೀರಾವರಿ ಬೆಳೆಗೆ 25 ಸಾವಿರ ರೂ., ಬಹುವಾರ್ಷಿಕ ಬೆಳೆಗೆ 28 ಸಾವಿರ ರೂ. ಪರಿಹಾರ ನೀಡಬೇಕಿರುತ್ತದೆ ಎಂದು ಸಚಿವರು ವಿವರಿಸಿದರು.