ತ್ರಿಪುರಾ: ತ್ರಿಪುರಾದ ಕುಮಾರಘಾಟ್ನಲ್ಲಿ ಜಗನ್ನಾಥ ರಥಯಾತ್ರೆ ವೇಳೆ ಬೆಂಕಿ ಬಿದ್ದು ಮೃತಪಟ್ಟ ಏಳು ಮಂದಿಯ ಕುಟುಂಬಕ್ಕೆ ಪ್ರಧಾನಿ ಮೋದಿಯವರು ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಹಾಗೇ ಗಾಯಗೊಂಡ 16 ಜನರ ಚಿಕಿತ್ಸೆಗಾಗಿ ತಲಾ 50 ಸಾವಿರ ರೂ. ನೆರವು ನೀಡುವುದಾಗಿ ತಿಳಿಸಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಿ ಮೋದಿ ‘ಕುಮಾರ್ಘಾಟ್ ರಥ ಯಾತ್ರೆಯಲ್ಲಿ ನಡೆದ ದುರಂತದಿಂದ ನೋವಾಗಿದೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಗಾಯಗೊಂಡವರು ಬೇಗ ಗುಣಮುಖರಾಗಲಿ. ಗಾಯಾಳುಗಳಿಗೆ ಎಲ್ಲ ರೀತಿಯ ನೆರವು ನೀಡುವಂತೆ ಸ್ಥಳೀಯ ಆಡಳಿತಕ್ಕೆ ಸೂಚಿಸಲಾಗಿದೆ’ ಎಂದಿದ್ದಾರೆ.
ಜಗನ್ನಾಥ ರಥಯಾತ್ರೆಯಲ್ಲಿ ಕಬ್ಬಿಣದ ರಥಕ್ಕೆ ಸರ್ವಾಲಂಕಾರ ಮಾಡಲಾಗಿತ್ತು. ದೇವತೆಗಳ ಉತ್ಸವ ಮೂರ್ತಿ ಅದರ ಮೇಲಿತ್ತು. ಆದರೆ ರಥದ ಮೇಲ್ಭಾಗ ವಿದ್ಯುತ್ ಹೈಟೆನ್ಷನ್ ತಂತಿಗೆ ತಗುಲಿದ ಪರಿಣಾಮ ರಥಕ್ಕೆ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಇಬ್ಬರು ಮಕ್ಕಳು ಸೇರಿ ಒಟ್ಟು ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉಳಿದಂತೆ 16 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.