ನವದೆಹಲಿ: ಪ್ರವಾಹ ಪೀಡಿತ 22 ರಾಜ್ಯಗಳ ವಿಪತ್ತು ಪರಿಹಾರ ನಿಧಿಗೆ 7,532 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಬುಧವಾರ ಬಿಡುಗಡೆ ಮಾಡಿದೆ. ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡದ ಎರಡು ರಾಜ್ಯಗಳು ಭಾರೀ ಮಳೆ ಮತ್ತು ಪ್ರವಾಹದಿಂದ ಜೀವಹಾನಿಯಿಂದ ತತ್ತರಿಸಿದ್ದು, ಅವುಗಳಿಗೆ ಕ್ರಮವಾಗಿ 180 ಕೋಟಿ ಮತ್ತು 413 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.
ಮಹಾರಾಷ್ಟ್ರಕ್ಕೆ 1,420 ಕೋಟಿ ರೂ., ಉತ್ತರ ಪ್ರದೇಶಕ್ಕೆ 812 ಕೋಟಿ ರೂ., ಒಡಿಶಾಕ್ಕೆ 707 ಕೋಟಿ ರೂ., ಬಿಹಾರಕ್ಕೆ 624 ಕೋಟಿ ರೂ., ಗುಜರಾತ್ಗೆ 584 ಕೋಟಿ ರೂ. ನೀಡಿದೆ. ಕೇಂದ್ರ ಗೃಹ ಸಚಿವಾಲಯದ ಶಿಫಾರಸ್ಸಿನಂತೆ ಈ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ದೇಶಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿಗಳನ್ನು ಸಡಿಲಿಸಿ ರಾಜ್ಯಗಳಿಗೆ ಕಳೆದ ಹಣಕಾಸು ವರ್ಷದಲ್ಲಿ ಒದಗಿಸಿದ ಮೊತ್ತದ ಬಳಕೆಯ ಪ್ರಮಾಣ ಪತ್ರಕ್ಕೆ ಕಾಯದೆ ತಕ್ಷಣದ ನೆರವಿನಂತೆ ರಾಜ್ಯಗಳಿಗೆ ಹಣ ಬಿಡುಗಡೆ ಮಾಡಲಾಗಿದೆ.
ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ವಾರ್ಷಿಕ ಕೇಂದ್ರ ಕೊಡುಗೆಯನ್ನು ಎರಡು ಸಮಾನ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ. ಮಾರ್ಗಸೂಚಿಗಳ ಪ್ರಕಾರ, ಹಿಂದಿನ ಕಂತಿನಲ್ಲಿ ಬಿಡುಗಡೆಯಾದ ಮೊತ್ತದ ಬಳಕೆಯ ಪ್ರಮಾಣಪತ್ರದ ಸ್ವೀಕೃತಿ ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ ಕೈಗೊಂಡ ಚಟುವಟಿಕೆಗಳ ಕುರಿತು ರಾಜ್ಯ ಸರ್ಕಾರದಿಂದ ವರದಿಯನ್ನು ಸ್ವೀಕರಿಸಿದ ನಂತರ ಹಣವನ್ನು ಬಿಡುಗಡೆ ಮಾಡಲಾಗುತ್ತದೆ.