ಹೊಸದಿಲ್ಲಿ: ಟ್ರಾಫಿಕ್ ಸಿಗ್ನಲ್ ಜಂಪ್ ಮಾಡಿದ ಕಾರು ಚಾಲಕನ್ನು ಪ್ರಶ್ನಿಸಿದ ಹೆಡ್ಕಾನ್ಸ್ಟೇಬಲ್ಗೆ ಅಮಾನುಷವಾಗಿ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮರ್ಸಿಡಿಸ್ ಚಾಲಕನೊಬ್ಬನ ವಿರುದ್ಧ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಚಾಲಕ ತನ್ನ ತಂದೆ ಕೇಂದ್ರ ಗೃಹ ಸಚಿವಾಲಯದಲ್ಲಿ (ಎಂಎಚ್ಎ) ಜಂಟಿ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದಾನೆ.
ಸಹಾಯಕ ಸಬ್ ಇನ್ಸ್ಪೆಕ್ಟರ್ ವೀರೇಂದ್ರ ಸಿಂಗ್, ಹೆಡ್ ಕಾನ್ಸ್ಟೆಬಲ್ ರಾಕೇಶ್ ಕುಮಾರ್ ಮತ್ತು ಕಾನ್ಸ್ಟೆಬಲ್ ಸುರೇಂದರ್ ಅವರನ್ನು ಹುಮಾಯೂನ್ ರಸ್ತೆಯಲ್ಲಿರುವ ಮಾರ್ಗ್ ಟಿ-ಪಾಯಿಂಟ್ ನಲ್ಲಿ ಕರ್ತವ್ಯದಲ್ಲಿದ್ದರು.
“ಸಂಜೆ 6.55 ರ ಸುಮಾರಿಗೆ, ಮೃಗಾಲಯದಿಂದ ಹುಮಾಯೂನ್ ರಸ್ತೆಯ ಕಡೆಗೆ ಹೋಗುವ ರಸ್ತೆಯಲ್ಲಿ ರೆಡ್ ಸಿಗ್ನಲ್ ಇತ್ತು. ಅಷ್ಟರಲ್ಲಿ, ಬಿಳಿ ಬಣ್ಣದ ಮರ್ಸಿಡಿಸ್, ಫಾರ್ಚುನರ್, ಇನ್ನೊಂದು ಎಸ್ಯುವಿ ವಾಹನ ನಿಯಮ ಮೀರಿ ಮುನ್ನುಗಿತ್ತು. ಎರಡೂ ವಾಹನಗಳು ತಾತ್ಕಾಲಿಕ ನಂಬರ್ ಪ್ಲೇಟ್ ಹೊಂದಿದ್ದು ವಾಹನ ನಿಲ್ಲಿಸುವಂತೆ ಪೊಲೀಸರು ಕೇಳಿಕೊಂಡರು.
ಈ ವೇಳೆ ಮರ್ಸಿಡಿಸ್ ಕಾರಿನ ಚಾಲಕ ಕೆಳಗಿಳಿದು ರಾಕೇಶ್ ಅವರನ್ನು ನಿಂದಿಸಿ, ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಅಲ್ಲದೇ ನನ್ನನ್ನು ಎದುರು ಹಾಕಿಕೊಂಡಲ್ಲಿ ನಿನ್ನ ಕೆಲಸದ ಮೇಲೆ ಪರಿಣಾಮ ಬೀರಬಹುದು ಎಂದು ರಾಕೇಶ್ ಅವರನ್ನು ಗದರಿಸಿರುವುದು ತಿಳಿದುಬಂದಿದೆ. ಈ ಕುರಿತು ಐಪಿಸಿ ಸೆಕ್ಷನ್ 186, 353 ಮತ್ತು 506 ಮತ್ತು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 184 ರ ಅಡಿಯಲ್ಲಿ ಗುರುವಾರ ಎಫ್ಐಆರ್ ದಾಖಲಾಗಿದೆ.